ರೋಜಾ ಖ್ಯಾತಿಯ ತಮಿಳು ಚಿತ್ರ ನಟ ಅರವಿಂದ ಸ್ವಾಮಿ ಬಳಿಕ ಇದೀಗ ಭಾರತದ ಮೈಕೆಲ್ ಜಾಕ್ಸನ್ ಖ್ಯಾತಿಯ ನಟ, ನಿರ್ದೇಶಕ, ಕೋರಿಯೋಗ್ರಾಫರ್ ಪ್ರಭುದೇವ ಸರದಿ. ನಟಿ ನಯನತಾರಾಳೊಂದಿಗೆ ಐಸ್ಪೈಸ್ ಆಡುತ್ತಿದ್ದ ಪ್ರಭುದೇವ, ಆಕೆಯನ್ನು ಮದುವೆಯಾಗುವ ಉದ್ದೇಶದಿಂದ ತನ್ನ ಪತ್ನಿಗೆ ಡೈವರ್ಸ್ ನೀಡಿದ್ದಾರೆ. ಈ ಡೈವರ್ಸ್, ಪ್ರಭುದೇವ ಪತ್ನಿಗೆ ಭರ್ಜರಿ ಪರಿಹಾರವನ್ನೇ ನೀಡಿದೆ.
ಪ್ರಭುದೇವ ಅವರು ಮೂಲತಃ ಮೈಸೂರಿನವರಾಗಿದ್ದರೂ, ತಮಿಳು ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಅವರು ಕನ್ನಡದಲ್ಲಿ 123 ಮತ್ತು ಎಚ್2ಒ ಚಿತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ ಸರ್ಜಾ ನಾಯಕ ನಟನೆಯ ಜೆಂಟ್ಲ್ಮ್ಯಾನ್ ಚಿತ್ರದ "ಚುಕುಬುಕು ರೈಲು" ಹಾಡಿಗೆ ಅವರು ನರ್ತಿಸಿದ ರೀತಿ, ಅವರನ್ನು ಪ್ರಸಿದ್ಧಿಗೆ ತಂದಿತು.
2 ಕಾರುಗಳು, 3 ಬಂಗಲೆ- ಫ್ಲ್ಯಾಟ್ಗಳು ಮತ್ತು ಹತ್ತು ಲಕ್ಷ ರೂಪಾಯಿ... ಇವೆಲ್ಲವನ್ನೂ ಪ್ರಭುದೇವ ತಮ್ಮ 15 ವರ್ಷಗಳಿಂದ ತಮ್ಮೊಂದಿಗಿದ್ದ ಪರಿತ್ಯಕ್ತ ಪತ್ನಿ ರಾಮ ಲತಾಗೆ ಪರಿಹಾರ ಧನ ರೂಪದಲ್ಲಿ ನೀಡಲು ಒಪ್ಪಿದ್ದಾರೆ. ಇದೇ ಮಾದರಿಯಲ್ಲಿ ಅರವಿಂದ ಸ್ವಾಮಿ ಕೂಡ ಇತ್ತೀಚೆಗೆ ತನ್ನ ಪತ್ನಿಗೆ ವಿಚ್ಛೇದನೆ ನೀಡಿದ್ದು, ಆತ ಪತ್ನಿಗೆ ತಿಂಗಳಿಗೆ 1 ಲಕ್ಷ ರೂಪಾಯಿ ಜೀವನಾಂಶದೊಂದಿಗೆ, ಕಾರು, ಬಂಗಲೆಗಳನ್ನೂ ನೀಡಬೇಕಾಗಿ ಬಂದಿತ್ತು.
ಪ್ರಭುದೇವ ಈ ಪ್ರಮಾಣದಲ್ಲಿ ಪರಿಹಾರ ನೀಡುವುದಕ್ಕೆ ಪ್ರತಿಯಾಗಿ ಲತಾ ಕೂಡ ನಟ ಮತ್ತು ಆತನ ಉಳಿದ ಆಸ್ತಿಯ ಮೇಲಿರುವ ತನ್ನೆಲ್ಲಾ ಹಕ್ಕುಗಳನ್ನು ಕಳೆದುಕೊಳ್ಳಲು ಮತ್ತು ಎಲ್ಲ ಕೇಸುಗಳನ್ನು ಹಿಂತೆಗೆದುಕೊಳ್ಳಲು ಒಪ್ಪಿದ್ದಾರೆ.
PR
ಈ ಕುರಿತ ಜಂಟಿ ಅಫಿದವಿತ್ ಅನ್ನು 'ಮಾಜಿ' ದಂಪತಿ ಮಂಗಳವಾರ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಈ ಮೂಲಕ ಚಿತ್ರ ನಟನನ್ನು ಒಳಗೊಂಡಿರುವ ಸಂಕೀರ್ಣವಾದ ನ್ಯಾಯಾಂಗ ಹೋರಾಟವೊಂದು ತಾತ್ವಿಕ ಅಂತ್ಯ ಕಂಡಂತಾಗಿದೆ.
ಇದರ ಪ್ರಕಾರ, ಪ್ರಭುದೇವ ಅವರು ಇಂಜಂಬಾಕ್ಕಮ್ನಲ್ಲಿರುವ ಬೀಚ್ ಬಂಗಲೆ, ಅಣ್ಣಾ ನಗರದಲ್ಲಿರುವ ಐಷಾರಾಮಿ ಮನೆ, ಆಂಧ್ರ ಪ್ರದೇಶದ ರಂಗಾ ರೆಡ್ಡಿ ಜಿಲ್ಲೆಯಲ್ಲಿರುವ ಎರಡು ಫ್ಲ್ಯಾಟ್ಗಳು, 2 ಕಾರುಗಳು (ಟೊಯೊಟಾ ಇನ್ನೋವಾ ಮತ್ತು ಮಹೀಂದ್ರಾ ಲೋಗನ್) ಮತ್ತು 10 ಲಕ್ಷ ರೂಪಾಯಿಯನ್ನು ನೀಡಬೇಕಾಗುತ್ತದೆ.
ಎಲ್ಲ ಆರಂಭವಾದದ್ದು ಲತಾ ಅವರು ಪ್ರಭುದೇವ ಜತೆಗಿನ ದಾಂಪತ್ಯ ಹಕ್ಕುಗಳನ್ನು ಮರುಸ್ಥಾಪಿಸಬೇಕು ಎಂದು ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದಾಗ. ನಟ, ನಿರ್ದೇಶಕರಾಗಿರುವ ತನ್ನ ಪತಿ ಬೇರೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದು, ಕುಟುಂಬವನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಕುಟುಂಬ ಪಾಲನೆಗೆ ಚಿಕ್ಕಾಸೂ ಕೊಡುತ್ತಿಲ್ಲ ಎಂದು ಆಕೆ ದೂರಿದ್ದರು.
ಮತ್ತೊಂದು ಅರ್ಜಿಯಲ್ಲಿ ಆಕೆ, ಪ್ರಭುದೇವ ಮತ್ತು ನಟಿ ನಯನತಾರ ಜಂಟಿ ಮಾಧ್ಯಮ ಸಂದರ್ಶನಗಳನ್ನು ನೀಡುವುದಕ್ಕೆ ತಡೆಯೊಡ್ಡಬೇಕು ಮತ್ತು ಅವರ ವಿವಾಹ ಬಂಧನವನ್ನು ಅಧಿಕೃತಗೊಳಿಸಬಾರದು ಎಂದು ಕೋರಿದ್ದರು.
ಕೇಸಿಗೆ ಸಂಬಂಧಿಸಿ ಕೌಟುಂಬಿಕ ನ್ಯಾಯಾಲಯವು ಪ್ರಭುದೇವ ಮತ್ತು ನಯನತಾರಾರಿಗೆ ಹಲವಾರು ನೋಟಿಸ್ಗಳನ್ನು ಜಾರಿಗೊಳಿಸಿದ್ದರೂ, ಅವುಗಳು ಪ್ರತಿವಾದಿಗಳಿಗೆ ತಲುಪಿರಲೇ ಇಲ್ಲ. ಆಗದರೆ ಮಂಗಳವಾರ ದಿಢೀರ್ ಆಗಿ ಲತಾ ಜೊತೆಗೆ ನ್ಯಾಯಾಲಯದಲ್ಲಿ ಪ್ರತ್ಯಕ್ಷವಾದ ಪ್ರಭುದೇವ ಪರಸ್ಪರ ಸಮ್ಮತಿಯಿಂದಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.
ಈ ಒಪ್ಪಂದದ ಪ್ರಕಾರ, ಪ್ರಭುದೇವ ಅವರು ತಮ್ಮ ಇಬ್ಬರು ಮಕ್ಕಳನ್ನು (ಎಂಟು ಮತ್ತು ಮೂರು ವರ್ಷದ) ತಾಯಿ ಲತಾಗೆ ಒಪ್ಪಿಸಬೇಕು (ಹಿರಿಯ ಮಗ ಎರಡು ವರ್ಷದ ಹಿಂದೆ 14ರ ಹರೆಯದಲ್ಲಿ ಕ್ಯಾನ್ಸರ್ನಿಂದಾಗಿ ತೀರಿಕೊಂಡಿದ್ದರು.), ಆದರೆ, ಈ ಮಕ್ಕಳನ್ನು ಭೇಟಿಯಾಗಲು ಪ್ರಭುದೇವರಿಗೆ ಯಾವುದೇ ಅಡ್ಡಿಯಿರಬಾರದು. ಈ ಮಕ್ಕಳ ಶಿಕ್ಷಣ ಮತ್ತು ವೈದ್ಯಕೀಯ ಖರ್ಚೆಲ್ಲವೂ ಪ್ರಭುದೇವರಿಗೆ ಸೇರಿದ್ದಾಗಿದ್ದು, ಇಂಜಂಬಾಕ್ಕಂನಲ್ಲಿರುವ ಬೀಚ್ ಬಂಗಲೆಯು ಈ ಮಕ್ಕಳ ಹೆಸರಿನಲ್ಲೇ ಇರುತ್ತದೆ.