ಚಿತ್ರರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಬಹುಭಾಷಾ ತಾರೆ ಭಾರತಿ ವಿಷ್ಣುವರ್ಧನ್ ಹಾಗೂ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ನಟ ಶಿವರಾಜ್ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಈ ಬಾರಿಯ ಎನ್ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ರವೀಂದ್ರ ಕಲಾ ಕ್ಷೇತ್ರದಲ್ಲಿ ಕರ್ನಾಟಕ ತೆಲುಗು ಅಕಾಡೆಮಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಾರತಿ ವಿಷ್ಣುವರ್ಧನ್, 'ತೆಲುಗಿನ ಜನ ತಮ್ಮ ಮನೆ ಹುಡುಗಿ ಎಂಬಂತೆ ನನ್ನನ್ನು ಕಂಡರು. ಈಗಲೂ ಅದನ್ನು ನೆನೆದರೆ ಆನಂದವಾಗುತ್ತದೆ. ಶಿವಾಜಿ, ಅಕ್ಕಿನೇನಿ ನಾಗೇಶ್ವರ ರಾವ್, ರಾಜ್ ಕುಮಾರ್, ಎಂಜಿಆರ್ ಹಾಗೂ ಎನ್ಟಿಆರ್ ಅವರಿಂದಾಗಿ ಸಮಯಪ್ರಜ್ಞೆಯನ್ನು ಕಲಿಯಲು ಸಾಧ್ಯವಾಯಿತು' ಎಂದು ಹೇಳಿದರು.
ಈಗ ಅದೇ ಎನ್ಟಿಆರ್ ಅವರ ಪುತ್ರಿಯಿಂದ ಈ ಪ್ರಶಸ್ತಿ ಪಡೆಯುತ್ತಿರುವದಕ್ಕೆ ತುಂಬಾ ಸಂತೋಷವಾಗುತ್ತಿದೆ' ಎಂದು ಭಾರತಿ ಭಾವುಕರಾಗಿ ನುಡಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವೆ ಡಾ.ಡಿ. ಪುರಂದೇಶ್ವರಿ, 'ಈತ್ತೀಚಿನ ದಿನಗಳಲ್ಲಿ ಸಾಮಾಜಿಕ ಸಂದೇಶ ನೀಡುವ ಚಿತ್ರಗಳು ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ' ಎಂದು ವಿಷಾದಿಸಿದರು.
ನಟ ಶಿವರಾಜ್ ಕುಮಾರ್ ಮಾತನಾಡಿ 'ಎನ್ಟಿಆರ್ ನನಗೆ ತಂದೆಯ ಸಮಾನ. ಅವರ ಹೆಸರಿನ ಇಂಥದ್ದೊಂದು ದೊಡ್ಡ ಪ್ರಶಸ್ತಿ ನನಗೆ ಲಭಿಸಿರುವುದು ನನ್ನ ಭಾಗ್ಯ. ಸರ್ಕಾರ ಡಾ. ರಾಜ್ ಕುಮಾರ್ ಹಾಗೂ ಡಾ. ಎನ್.ಟಿ. ರಾಮರಾವ್ ಅವರಿಗೆ ಭಾರತ ರತ್ನ ಕೊಡಲಿ, ಬಿಡಲಿ. ಆದರೆ ಅವರಿಬ್ಬರೂ ನಿಜವಾಗಿ ನಮ್ಮ ಪಾಲಿಗೆ ಭಾರತ ರತ್ನಗಳೇ' ಎಂದು ಹೇಳಿದರು.