'ಕೆರೆ ನೀರು ಕುಡಿಯೋಕೆ ದೊಣ್ಣೆ ನಾಯಕನ ಅಪ್ಪಣೆಯೇ' ಎಂಬುದು ಕನ್ನಡದ ಜಾಣನುಡಿ. ಅಗತ್ಯ ಸಂಪನ್ಮೂಲಗಳನ್ನು ಹೊಂದಿರುವ ಜನರು ಇಲ್ಲೂ ಒಂದು ಕೈ ನೋಡಿಬಿಡೋಣ ಎಂದು ಚಿತ್ರನಿರ್ಮಾಣಕ್ಕೆ ಇಳಿಯುವುದುಂಟು. ಪ್ರಯತ್ನ ಕೈಹಿಡಿಯಿತೋ ಇಲ್ಲೇ ಉಳಿದುಕೊಂಡು ಮುಂದುವರಿಯುತ್ತಾರೆ, ಅಥವಾ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತಮ್ಮ ಎಂದಿನ ಕ್ಷೇತ್ರಕ್ಕೆ ಮರಳುತ್ತಾರೆ. ಹೊಸಬರಿಂದ ಕೂಡಿರುವ 'ತಿಲ್ಲಾನ' ಎಂಬ ಚಿತ್ರವು ಸೆಟ್ಟೇರಿರುವ ಹಿನ್ನೆಲೆಯಲ್ಲಿ ಈ ಮಾತುಗಳನ್ನಾಡಬೇಕಾಗಿ ಬಂತು.
ತಾಯಿ-ಮಗನ ವಾತ್ಸಲ್ಯ ಪ್ರೀತಿಗಿಂತ ದೊಡ್ಡದು, ಅದನ್ನು ಯಾವತ್ತೂ ಮರೆಯಬಾರದು ಎಂಬ ಕಥಾಹಂದರವನ್ನು ಒಳಗೊಂಡಿರುವ ಈ ಚಿತ್ರದ ಅಂತ್ಯದಲ್ಲಿ ಒಂದು ಸಂದೇಶವೂ ಇರುತ್ತದೆಯಂತೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆಯಂತೆ.
ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿಯಾಗಿದ್ದ ಮತ್ತು ಸುದ್ದಿ ವಾಹಿನಿಯೊಂದರಲ್ಲಿ ನಿರೂಪಕರಾಗಿದ್ದ ಗಜೇಂದ್ರ ಎಂಬಾತ ಈ ಚಿತ್ರದ ಮೂಲಕ ನಾಯಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸುಷ್ಮಾ ಮತ್ತು ಶೃತಿ ನಾಯಕಿಯರಂತೆ. ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅನಂತ್ನಾಗ್ ಮತ್ತು ತಾರಾ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಮಾಧವನ್ ಸಂಗೀತ ನಿರ್ದೇಶಕರು. ಇವರು ಕೇರಳದವರು ಎಂಬುದು ಗಮನಾರ್ಹ ಸಂಗತಿ.
ಸಿಂಗಾರಿಗೌಡರು ಈ ಚಿತ್ರದ ನಿರ್ಮಾಪಕರು ಮತ್ತು ಮಧುಸೂದನ್ ನಿರ್ದೇಶಕರು. ರೇಣುಕುಮಾರ್ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ ಚಿತ್ರಕ್ಕಿದೆ. ಫೈವ್ ಸ್ಟಾರ್ ಗಣೇಶ್ ಮತ್ತು ಮಾಲೂರು ಶ್ರೀನಿವಾಸ್ ನೃತ್ಯನಿರ್ದೇಶನವನ್ನು ಮಾಡಿದ್ದಾರೆ. ನಿರ್ದೇಶಕ ಮಧುಸೂದನ್ ತಂದೆ ಕೆ.ಈಶ್ವರಸ್ವಾಮಿಯವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿರುವುದರ ಜೊತೆಗೆ ತಾಂತ್ರಿಕ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರಂತೆ. ಹೊಸಬರ ಈ ಚಿತ್ರಕ್ಕೆ ಶುಭವನ್ನು ಹಾರೈಸೋಣ.