ಮುಖ್ಯ ಪುಟಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಕೋರ್ಟ್ ಆದೇಶ ನಾಳೆ (Darshan Arrested for Assaulting Wife | Challenging Star Darshan | Kannada Actor Darshan | Vijayalaxmi)
ದರ್ಶನ್ ಪ್ರಕರಣಕ್ಕೆ ಹೊಸ ಟ್ವಿಸ್ಟ್; ಕೋರ್ಟ್ ಆದೇಶ ನಾಳೆ
PR
ತನ್ನ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜಾಮೀನು ವಿಚಾರಣೆ ಇಂದು ಮಧ್ಯಾಹ್ನ ನಡೆದಿದ್ದು, ಈ ಕುರಿತು ತನಿಖಾಧಿಕಾರಿಗಳು ಸಲ್ಲಿಸಿದ್ದ ಕೇಸ್ ಫೈಲ್ನಲ್ಲಿ, ದರ್ಶನ್ ಪ್ರಕರಣ ಐಪಿಸಿ ಸೆಕ್ಷನ್ 307 ಕೊಲೆಯತ್ನಕ್ಕೆ ಒಳಪಡುವುದಿಲ್ಲ. ಬದಲಾಗಿ 324 ಗಾಯಗೊಳಿಸುವ ಕೃತ್ಯಕ್ಕೆ ಸಂಬಂಧಿಸಿದೆ ಎಂದು ಉಲ್ಲೇಖಿಸಲಾಗಿದೆ.
ಆದರೆ, ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ನಿರಾಕರಿಸಲು ಸರ್ಕಾರಿ ಅಭಿಯೋಜಕರು ಕೋರಿಕೆ ಸಲ್ಲಿಸಿದ್ದು, ನ್ಯಾಯಾಲಯ ತೀರ್ಪನ್ನು ಮಂಗಳವಾರಕ್ಕೆ ಮುಂದೂಡಿದೆ.
ಈಗಾಗಲೇ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿರುವ ವಿಜಯಲಕ್ಷ್ಮಿ, ಸರಕಾರಿ ಅಭಿಯೋಜಕರ ಜತೆ ಚರ್ಚೆ ನಡೆಸಿ ಮನೆಗೆ ವಾಪಾಸಾಗಿದ್ದಾರೆ. ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಅವರು ಕೂಡ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ.
14 ದಿನಗಳ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಚಾಲೆಂಜಿಂಗ್ ಸ್ಟಾರ್ ಅನಾರೋಗ್ಯದ ಕಾರಣದಿಂದ ಜಯನಗರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜಾಮೀನು ವಿಚಾರಣೆಗೆ ಅವರೇನು ಆಗಮಿಸಬೇಕಾಗಿಲ್ಲ. ದರ್ಶನ್ ಪರವಾಗಿ ಅವರ ವಕೀಲರೇ ವಾದ ಮಂಡಿಸಲಿದ್ದಾರೆ.
ತನ್ನ ಪತ್ನಿಗೆ ಕಳೆದ ಒಂದು ವರ್ಷದಿಂದ ವಿಪರೀತ ಕಿರುಕುಳ ನೀಡುತ್ತಾ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಭಾರತೀಯ ದಂಢ ಸಂಹಿತೆ ಸೆಕ್ಷನ್ 324 (ಗಾಯಗೊಳಿಸುವ ಕೃತ್ಯ), 232 (ಕೈಯಿಂದ ಹಲ್ಲೆ), 498 ಎ (ಪತ್ನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ), 507 (ಜೀವ ಬೆದರಿಕೆ) ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ. ಇದಲ್ಲದೆ ರಿವಾಲ್ವರ್ ತೋರಿಸಿ ಬೆದರಿಸಿರುವ ಆರೋಪ ಇರುವುದರಿಂದ ಶಸ್ತ್ರಾಸ್ತ್ರ ಕಾಯ್ದೆ ಕಲಂ 27 ರಡಿ ಕೂಡ ಪ್ರಕರಣ ದಾಖಲಿಸಲಾಗಿದ್ದು, ಆರೋಪ ಸಾಬೀತಾದರೆ ಗರಿಷ್ಠ 7 ವರ್ಷ ಶಿಕ್ಷೆ ಅನುಭವಿಸಬೇಕಾಗಿದೆ.
ಈ ಎಲ್ಲಾ ಪ್ರಕರಣಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿರುವುದರಿಂದ ನ್ಯಾಯಾಲಯದಲ್ಲಿ ಜಾಮೀನು ಸಿಗುವುದು ಕಷ್ಟ ಎಂಬುದು ಕಾನೂನು ತಜ್ಞರ ಅಭಿಪ್ರಾಯ.