ರಿಯಲ್ ಸ್ಟಾರ್ ಹೆಗ್ಗಳಿಕೆಯ ಉಪ್ಪಿಗೆ ಕರೆಕ್ಟಾಗಿ ಇಂದಿಗೆ ನಲುವತ್ತೆರಡು ವರ್ಷ. ಹೌದು ಇಂದು ಉಪೇಂದ್ರ ಜನುಮದಿನ. ನಿರ್ದೇಶಕನಾಗಲು ಗಾಂಧಿನಗರಕ್ಕೆ ಕಾಲಿಟ್ಟ ಉಪೇಂದ್ರ ಈಗ್ಗೆ ಹೆಚ್ಚು ಮಾಡಿದ್ದು ನಿರ್ದೇಶನಕ್ಕಿಂತ ನಟನೆಯೇ. ಕುಂದಾಪುರದ ಕೋಟೇಶ್ವರದ ಸಾದಾ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ 1967ರ ಸೆಪ್ಟೆಂಬರ್ 18ರಂದು ಜನಿಸಿದ ಉಪೇಂದ್ರ ಈಗ ನಟ, ನಿರ್ದೇಶಕ, ಚಿತ್ರಕಥೆ ಬರಹಗಾರ ಎಲ್ಲವೂ. ನಿರ್ದೇಶಕ ಕಾಶೀನಾಥ್ ಗರಡಿಯಲ್ಲಿ ಬರಹಗಾರನಾಗಿ, ಸಹಾಯಕ ನಿರ್ದೇಶಕನಾಗಿ ಬೆಳೆದ ಉಪ್ಪಿ ನಿರ್ದೇಶಿಸಿದ ಮೊದಲ ಚಿತ್ರ ತರ್ಲೆ ನನ್ಮಗ.
90ರ ದಶಕದಲ್ಲಿ ಉಪೇಂದ್ರ ನಿರ್ದೇಶಿಸಿದ ಓಂ ಚಿತ್ರ ಕ್ನನಡ ಚಿತ್ರರಂಗಕ್ಕೆ ಹೊಸ ಆಯಾಮವನ್ನೇ ನೀಡಿತು. ನಿಜವಾದ ಬೆಂಗಳೂರು ಗ್ಯಾಂಗ್ಸ್ಟರ್ಗಳನ್ನೇ ನಟನೆಗೆ ಎಳೆದು ತಂದ ಓಂನಲ್ಲಿ ಮೇಳೈಸಿದ್ದು ಅಪ್ಪಟ ಹಿಂಸಾಚಾರ. ಈ ಚಿತ್ರದಿಂದ ಉಪ್ಪಿಯ ಕೀರ್ತಿಯ ಶಿಖರ ಉತ್ತುಂಗಕ್ಕೇರಿತು. ಅಷ್ಟೇ ಅಲ್ಲ, ಸ್ಯಾಂಡಲ್ ವುಡ್ ಎಂಬ ಕನ್ನಡ ಚಿತ್ರರಂಗಲ್ಲಿ ಉಪ್ಪಿಯ ಅಭಿಮಾನಿಗಳ ಹೊಸ ವರ್ಗವೇ ಸೃಷ್ಟಿಯಾಯಿತು. ನಂತರ ಉಪೇಂದ್ರ ನಿರ್ದೇಶನದ ಎ ಹಾಗೂ ಉಪೇಂದ್ರ ಚಿತ್ರಗಳೂ ಸೂಪರ್ ಡೂಪರ್ ಹಿಟ್ ಸಾಲಿಗೆ ಸೇರಲ್ಪಟ್ಟವು. ಮನುಷ್ಯನ ಭಾವುಕತೆಗೆ ಹೊಸ ಚೌಕಟ್ಟು ನೀಡಿ ಬೇರೆಯೇ ತೆರನಾಗಿ ಪರಿಕಲ್ಪಿಸಿ ತೆರೆಗೆ ನೀಡಿದ್ದು ಉಪೇಂದ್ರ ಅವರ ಹೆಗ್ಗಳಿಕೆ. ಉಪೇಂದ್ರ ಚಿತ್ರದ ಮೂಲಕ ಬಾಲಿವುಡ್ಡಿನ ಆಗಿನ ಖ್ಯಾತ ಚಿತ್ರನಟಿ ರವೀನಾ ಟಂಡನ್ ಅವರನ್ನೂ ಕನ್ನಡಕ್ಕೆ ಉಪೇಂದ್ರ ಎಳೆದು ತಂದಿದ್ದರು.
MOKSHA
ಹಾಗೆ ನೋಡಿದರೆ ಉಪೇಂದ್ರ ಅವರ ಚೊಚ್ಚಲ ನಿರ್ದೇಶನ ತರ್ಲೆ ನನ್ಮಗ ಚಿತ್ರ ಹಿಟ್ ಚಿತ್ರ. ಇದು ಜಗ್ಗೇಶ್ ಮೊದಲು ನಾಯಕ ನಟನಾಗಿ ಬಣ್ಣ ಹಚ್ಚಿದ ಚಿತ್ರ. ಪಕ್ಕಾ ಕಾಮಿಡಿ ಚಿತ್ರವಾಗಿರುವ ಇದು ಜಗ್ಗೇಶ್ ನಟನೆಯ ಹಿಟ್ ಚಿತ್ರಗಳಲ್ಲಿ ಮುಂಚೂಣಿಯ ಸ್ಥಾನ ಪಡೆಯುತ್ತದೆ. ಉಪೇಂದ್ರ ನಿರ್ದೇಶನದ ಎರಡನೇ ಚಿತ್ರ ಶ್ ಚಿತ್ರ ಕೂಡಾ ಬಾಕ್ಸ್ ಆಫೀಸಿನಲ್ಲಿ ಭಾರೀ ಯಶಸ್ಸು ಪಡೆಯಿತು. ಕುಮಾರ್ ಗೋವಿಂದ್ ನಾಯಕ ನಟನಾಗಿ ನಟಿಸಿದ್ದ ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಇದಾದ ನಂತರ ಉಪ್ಪಿ ನಿರ್ದೇಶಿಸಿದ ಓಂ ಚಿತ್ರದ ಬಗ್ಗೆ ಮತ್ತೆ ವಿವರಿಸಿ ಹೇಳಬೇಕಿಲ್ಲ. ಶಿವರಾಜ್ ಕುಮಾರ್, ಪ್ರೇಮಾ ಅಭಿನಯದ ಈ ಚಿತ್ರ ಬೆಂಗಳೂರು ಅಂಡರ್ ವರ್ಲ್ಡ್ ಜಗತ್ತನ್ನು ತೆರೆಯ ಮೇಲೆ ಬಿಂಬಿಸಿತು. ಈ ಚಿತ್ರ ಹಿಟ್ ಆಗುವ ಜತೆಗೇ, ಉಪ್ಪಿ ಇದರಲ್ಲಿ ನಿಜವಾದ ಭೂಗತ ಪಾತಕಿಗಳನ್ನು ಕ್ಯಾಮರಾ ಮುಂದೆ ನಿಲ್ಲಿಸಿದರು ಎಂಬ ಕಾರಣಕ್ಕಾಗಿ ವಿವಾದವನ್ನೇ ಸೃಷ್ಠಿಸಿತು.
ಆದರೆ, ಎ ಚಿತ್ರದ ನಂತರ ಬಂದ ಸ್ವಸ್ತಿಕ್ ಚಿತ್ರ ತೋಪಾಯಿತು. ನಂತರ ಬಂದ ಉಪೇಂದ್ರ ಚಿತ್ರ ಗೆದ್ದಿತು. 1999ರಲ್ಲಿ ಬಂದ ಉಪೇಂದ್ರ ಚಿತ್ರದ ನಂತರ ಉಪೇಂದ್ರ ನಿರ್ದೇಶನದಿಂದ ಹೊರಸರಿದರು. ನಟನೆಯಲ್ಲೇ ಮೇಳೈಸಿದರು. ಉಪೇಂದ್ರ ಮತ್ತೆ ನಿರ್ದೇಶಿಸುತ್ತಾರಂತೆ ಎಂದು ಪ್ರತಿ ವರ್ಷವೂ ಹವಾ ಸೃಷ್ಠಿಯಾದರೂ ಮತ್ತೆ ಉಪೇಂದ್ರ ನಿರ್ದೇಶನಕ್ಕೆ ಮರಳಲೇ ಇಲ್ಲ. ಈಗಷ್ಟೇ ನಿರ್ದೇಶಿಸುತ್ತೇನೆ ಎಂದು ಸ್ವತಃ ಉಪ್ಪಿ ಬಾಯ್ಬಿಟ್ಟಿದ್ದು ಅವರ ಅಭಿಮಾನಿಗಳಲ್ಲಿ ಮತ್ತೆ ಕುತೂಹಲ ಸೃಷ್ಟಿಸಿದೆ. ಅದಕ್ಕೆ ಸೂಪರ್ ಎಂಬರ್ಥ ಬರುವಂಥ ಚಿಹ್ನೆಯ ಟೈಟಲ್ ಅನ್ನೂ ಕೊಟ್ಟಿದ್ದಾರೆ. ಇಷ್ಟೆಲ್ಲ ಮಾಡಿ ಮೌನವೃತ ತಾಳಿದ್ದಾರೆ. ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ನಿರ್ಮಾಪಕರೆಂದೂ, ಕನ್ನಡತಿ ಬಾಲಿವುಡ್ ನಟಿ ಐಶ್ವರ್ಯಾ ರೈ ನಾಯಕಿಯೆಂದೂ ಸುದ್ದಿ ಹಬ್ಬಿತ್ತು. ಇದೆಲ್ಲ ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ.
MOKSHA
ಹಾಗೆ ನೋಡಿದರೆ, ಉಪೇಂದ್ರ ನಿರ್ದೇಶನ ಬಿಟ್ಟ ಮೇಲೆ ಗೆದ್ದ ಚಿತ್ರಗಳು ಕಡಿಮೆಯೇ. ನಂತರ ನಟಿಸಿದ ಬಹುತೇಕ ಚಿತ್ರಗಳು ರಿಮೇಕ್ ಎಂಬುದೂ ಕೂಡಾ ಅಷ್ಟೇ ಸತ್ಯ. ತಮ್ಮ ನಿರ್ದೇಶನದ ಎ ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಿದ ಉಪೇಂದ್ರ, 'ಉಪೇಂದ್ರ' ಚಿತ್ರದ ನಂತರ ನಿರ್ದೇಶನ ಕೈಬಿಟ್ಟು ನಟನಾಗಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ಬೆರಳೆಣಿಕೆಯ ಚಿತ್ರ ಬಿಟ್ಟರೆ ಸಾಲು ಸಾಲು ಚಿತ್ರಗಳು ತೋಪಾದವು. ಪ್ರೀತ್ಸೇ ಪ್ರೀತ್ಸೇ, ಎಚ್2ಒ, ಸೂಪರ್ ಸ್ಟಾರ್, ನಾಗರಹಾವು, ನಾನು ನಾನೇ, ಹಾಲಿವುಡ್, ಕುಟುಂಬ, ರಕ್ತ ಕಣ್ಣೀರು, ಓಂಕಾರ, ಗೋಕರ್ಣ, ಗೌರಮ್ಮ, ನ್ಯೂಸ್, ಆಟೋ ಶಂಕರ್, ಉಪ್ಪಿ ದಾದಾ ಎಂಬಿಬಿಎಸ್, ತಂದೆಗೆ ತಕ್ಕ ಮಗ, ಐಶ್ವರ್ಯ, ಪರೋಡಿ, ಮಸ್ತಿ, ಅನಾಥರು, ಲವಕುಶ, ಬುದ್ಧಿವಂತ, ದುಬೈಬಾಬು ಇವರ ಅಭಿನಯದ ಇನ್ನಿತರ ಚಿತ್ರಗಳು. ಇವಿಷ್ಟರಲ್ಲಿ ಪ್ರೀತ್ಸೇ ಪ್ರೀತ್ಸೇ 25 ವಾರ ಓಡಿದರೆ, ರಕ್ತ ಕಣ್ಣೀರು, ಗೋಕರ್ಣ, ಗೌರಮ್ಮ, ಆಟೋ ಶಂಕರ್ ಚಿತ್ರಗಳು 100 ದಿನ ಓಡಿವೆ. ಸದ್ಯ ಉಪೇಂದ್ರ ಅಭಿನಯದ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ರಜನಿ, ಲಂಡನ್ ಗೌಡ, ಶ್ರೀಮತಿ ಚಿತ್ರಗಳು ಹೊರಬರಲು ಬಾಕಿ ಇವೆ.
MOKSHA
ಉಪ್ಪಿ ಕನ್ನಡದಲ್ಲದೆ ತಮಿಳು, ತೆಲುಗಿನಲ್ಲೂ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ಸತ್ಯಂ, ಕಾವೇರಿ ಮತ್ತಿತರ ಚಿತ್ರಗಳಲ್ಲಿ ಕಾಣಿಸಿಕೊಂಡರೆ, ತೆಲುಗಿನಲ್ಲಿ ಕನ್ಯಾದಾನಂ, ಎಚ್2ಒ, ಓಕೆಮಟ, ರಾ, ಟಾಸ್ ಮತ್ತಿತರ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಈಗ ಉಪೇಂದ್ರ ಚಿತ್ರ ನಿರ್ದೇಶಿಸದೆ ಬರೋಬ್ಬರಿ 10 ವರ್ಷಗಳೇ ಸಂದಿವೆ. ಅಷ್ಟರಲ್ಲಿ ಮತ್ತೆ ನಿರ್ದೇಶಿಸುತ್ತೇನೆ ಎಂದು ಸದ್ದು ಮಾಡಿದ್ದಾರೆ. ಅಷ್ಟರಲ್ಲಿ ಸಿನಿಮಾ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳೂ ನಡೆದಿವೆ. ಬಹುತೇಕ ಎಲ್ಲ ಹಿಟ್ ಚಿತ್ರಗಳನ್ನೇ ನಿರ್ದೇಶಿಸಿದ್ದ ಉಪ್ಪಿಯ ಬಗ್ಗೆ ಪ್ರೇಕ್ಷಕರ ಕುತೂಹಲವೂ ಬೆಟ್ಟದಷ್ಟಿದೆ. ಬೆಟ್ಟದಷ್ಟು ನಿರೀಕ್ಷೆ ಉಪ್ಪಿಯ ಹೆಗಲ ಮೇಲೆ ಮಣಭಾರವನ್ನೇ ಹೊರಿಸಿವೆ. ಹೀಗಾಗಿ ಉಪ್ಪಿಯಷ್ಟೇ ಅಲ್ಲ, ಪ್ರೇಕ್ಷಕನ ಮುಂದೆಯೂ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಎದ್ದು ನಿಂತಿದೆ. ಉಪ್ಪಿ ಮತ್ತೆ ನಿರ್ದೇಶನದಲ್ಲಿ ಗೆಲ್ತಾರಾ?
ಏನೇ ಇರಲಿ. ನಾನು ನಾನೇ ಎಂದ ಈ ಉಪೇಂದ್ರರ ಹೊಸ ಅವತಾರ ನೋಡಲು ಪ್ರೇಕ್ಷಕರನ್ನು ಕಾದು ನಿಂತಿದ್ದಾರೆ. ಉಪ್ಪಿಯ ಉಪ್ಪಿನ ರುಚಿ ಗೊತ್ತಾಗುವ ಮೊದಲು ಅವರ 42ನೇ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳೋಣ.