ಲೇಖನ
ಮುಖ್ಯ ಪುಟ » ಮನರಂಜನೆ » ಯಕ್ಷಗಾನ » ಲೇಖನ » ಏಕೈಕ ಮಹಿಳಾ ವೃತ್ತಿ ಭಾಗವತ ಲೀಲಾಗೆ ಅಕಾಡೆಮಿ ಪ್ರಶಸ್ತಿ (Leela Baipadithaya | Yakshagana | Yakshagana Academy Award)
ಹಿಂದಿನದು|ಮುಂದಿನದು
ಅವಿನಾಶ್ ಬಿ.
WD
ಕನ್ನಡ ಕರಾವಳಿಯಷ್ಟೇ ಏಕೆ, ಕೇರಳದ ಉತ್ತರ ಭಾಗದ ಕರಾವಳಿಯಲ್ಲಿಯೂ ಚೆಂಡೆಯ ಸದ್ದು ಕೇಳದವರಿಲ್ಲ, ಮದ್ದಳೆಯ ಧೋಂ-ಕಾರಕ್ಕೆ ತಲೆದೂಗದವರಿಲ್ಲ, ರಂಗಸ್ಥಳದ ಗೆಜ್ಜೆಯ ಸದ್ದಿಗೆ ಮನಸೋಲದವರಿಲ್ಲ. ಪರಶುರಾಮ ಸೃಷ್ಟಿಯೆಂದೇ ಕರೆಯಲಾಗುವ ಮಣ್ಣಿನ ಕಣ ಕಣದಲ್ಲಿಯೂ ಯಕ್ಷಗಾನದ ಸುವಾಸನೆಯಿದೆ, ಜನರ ನಾಡಿ ಮಿಡಿತವೂ ಯಕ್ಷಗಾನದೊಂದಿಗೆ ಮಿಳಿತವಾಗಿದೆ.

ಅಂಥದ್ದೊಂದು ಸುಂದರವಾದ ಪರಿಸರದಲ್ಲೇ ಹುಟ್ಟಿ ಬೆಳೆದವರು ಶ್ರೀಮತಿ ಲೀಲಾ ಬೈಪಾಡಿತ್ತಾಯರು. ತುಳುನಾಡು ಎಂದೇ ಕರೆಯಲಾಗುವ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳು, ಯಕ್ಷಗಾನದ ಬಡಗು ತಿಟ್ಟಿನ ವೈವಿಧ್ಯದ ಸೊಗಡುಳ್ಳ ಉತ್ತರ ಕನ್ನಡ ಜಿಲ್ಲೆ ಹಾಗೂ ಯಕ್ಷಗಾನ ತೆಂಕು ತಿಟ್ಟಿನ ತವರೂರು ಎಂದೇ ಬಣ್ಣಿಸಲಾಗುವ ಕಾಸರಗೋಡು ಜಿಲ್ಲೆಗಳಾದ್ಯಂತ ಸರಿ ಸುಮಾರು ನಾಲ್ಕು ದಶಕಗಳ ಕಾಲ ಮನೆಮಾತಾದವರು. ಈಗ ಅವರ ಕಲಾ ತಪಸ್ಸನ್ನು ರಾಜ್ಯ ಸರಕಾರ ಗುರುತಿಸಿದೆ. ಕರ್ನಾಟಕದ ಯಕ್ಷಗಾನ ಅಕಾಡೆಮಿಯ 2010ನೇ ಸಾಲಿನ ಪ್ರಶಸ್ತಿಯು ಅವರನ್ನು ಅರಸಿಕೊಂಡು ಬಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಂದಾರ್ತಿ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಮೇ 1, 2011ರಂದು ನಡೆಯಲಿದೆ.

ಗಂಡು ಮೆಟ್ಟಿನ ಕಲೆಯಲ್ಲಿ ಮೆರೆದಾಕೆ...
ಕರಾವಳಿಯ ರಮ್ಯಾದ್ಭುತ ಕಲಾ ಪ್ರಕಾರವಾಗಿರುವ ಯಕ್ಷಗಾನದಲ್ಲೆ ಕಸುಬು ಮಾಡಬೇಕಿದ್ದರೆ ಧಮ್ ಬೇಕು ಎಂಬ ಮಾತಿದೆ. ಯಾಕೆಂದರೆ ಹೇಳಿ ಕೇಳಿ ಇದು ಗಂಡು ಮೆಟ್ಟಿನ ಕಲೆ. ಅಂಥದ್ದೊಂದು ವಾತಾವರಣದಲ್ಲಿ ಮೊತ್ತ ಮೊದಲ ಬಾರಿಗೆ ಕಂಚಿನ ಕಂಠ ಮೊಳಗಿಸಿದವರು ಲೀಲಾ ಬೈಪಾಡಿತ್ತಾಯರು.

ಕಾಸರಗೋಡಿನ ಮಧೂರು ಅವರ ಹುಟ್ಟೂರು. ಅಲ್ಲಿನ ಸುತ್ತಮುತ್ತಲಿನ ಪರಿಸರದಲ್ಲಿ ಇಂದಿಗೂ ಕೂಡ ಚೆಂಡೆ ಮದ್ದಳೆಗಳ ನಿನಾದ ಕೇಳಿ ಬರುತ್ತಿರುತ್ತದೆ. ಅಂಥದ್ದೊಂದು ಪರಿಸರದಲ್ಲೇ ಹುಟ್ಟಿ ಬೆಳೆದ ಲೀಲಾ ಅವರಿಗೆ, ಅದೇನು ಮನಸ್ಸು ಬಂತೋ... ಮಧೂರಿನ ಸರಳಾಯರ ಮನೆತನದಲ್ಲಿ ಸಂಗೀತಾಭ್ಯಾಸ ಪ್ರಾರಂಭಿಸಿದ್ದರು. ಬಡತನದ ಬೇಗೆಯ ನಡುವೆಯೇ ಸಂಗೀತಾಭ್ಯಾಸ ಮಾಡಿದ್ದು, ಇವರ ಜೀವನಕ್ಕೆ ಮುಂದೊಂದು ದಿನ ದಾರಿ ದೀಪವಾಗುತ್ತದೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ. ಶಾಲೆಗೆ ಹೋಗದೆಯೇ, ಅಣ್ಣನಿಂದಲೋ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡವರು ಅವರು ಎಂಬುದು ಇಲ್ಲಿ ಉಲ್ಲೇಖಿಸಲೇಬೇಕಾದ ಅಂಶ. ಅದರ ನಡುವೆಯೇ, ಮದ್ರಾಸ್ ಹಿಂದಿ ಪ್ರಚಾರ ಸಭಾದಿಂದ ಹಿಂದಿ ವಿಶಾರದ (ಸ್ನಾತಕ ಪದವಿಗೆ ಸಮ) ಪದವಿಯನ್ನೂ ಪಡೆದಿದ್ದರು ಎಂಬುದು ಅವರೊಳಗಿನ ಕಲಿಕೆಯ ತುಡಿತಕ್ಕೆ ಸಾಕ್ಷಿ. ಇದೆಲ್ಲವೂ ಶಾಲೆಗೆ ಹೋಗದೆ ಸಾಧಿಸಿದ್ದು.

ಬಹುಶಃ ಶಾರದೆ ಇದ್ದಲ್ಲಿ ಲಕ್ಷ್ಮಿ ಇರಲು ಹಿಂದೇಟು ಹಾಕುತ್ತಾಳೆ ಎಂಬುದು ಇದಕ್ಕೇ ಇರಬೇಕೇನೋ... ಕಿತ್ತು ತಿನ್ನುವ ಬಡತನ. ತಂದೆಯವರ ನಿಧನಾನಂತರ ಅವರು ಬೆಳೆದಿದ್ದು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿನ ತಮ್ಮ ಸೋದರ ಮಾವನ ಮನೆಯಲ್ಲಿ. ಮಾವ ರಾಮಕೃಷ್ಣ ಭಟ್ ಅವರು ಮಧೂರು ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ದೇವ ನೃತ್ತ (ಉತ್ಸವ ಸಂದರ್ಭ ಉತ್ಸವ ಮೂರ್ತಿಯನ್ನು ಹೊತ್ತು ನರ್ತಿಸುವ ವಿಶಿಷ್ಟ ನೃತ್ಯ ಪ್ರಕಾರ)ದಲ್ಲಿ ಸುಪ್ರಸಿದ್ಧರು. ಇದೇ ಕಲೆಯಲ್ಲಿ ಅವರಿಗೆ ಕೂಡ ಕೇರಳ ರಾಜ್ಯ ಪ್ರಶಸ್ತಿಯೂ ಬಂದಿತ್ತೆಂಬುದು ಇಲ್ಲಿ ಉಲ್ಲೇಖಾರ್ಹ.

ಸಂಗೀತದಿಂದ ಯಕ್ಷಗಾನಕ್ಕೆ...
WD
ಹೀಗೆ, ಕಲಾ ಪರಿಸರದಲ್ಲೇ ಬೆಳೆದಿದ್ದರಾದರೂ, ಯಕ್ಷಗಾನದಿಂದ ದೂರವೇ ಇದ್ದಿದ್ದ ಲೀಲಾ ಅವರಿಗೆ, ಅದು ಹೇಗೆ ಯಕ್ಷಗಾನದ ನಂಟು ಹತ್ತಿಕೊಂಡಿತೆಂದರೆ, ಮದುವೆಯಾಗುವ ಮೂಲಕ! ಈಗ ತೆಂಕುತಿಟ್ಟಿನ ಅಗ್ರಮಾನ್ಯ ಗುರುಗಳು ಎಂದೇ ಪರಿಗಣಿಸಲ್ಪಟ್ಟಿರುವ ಹರಿನಾರಾಯಣ ಬೈಪಾಡಿತ್ತಾಯರು, ಜೀವನ ರಥ ಸಾಗಿಸಲು ತಮ್ಮ ಪಥದಲ್ಲೇ ಕರೆದೊಯ್ದರು. ಅವರು ಮದುವೆಯಾಗಿ ಬಂದದ್ದು ಪತಿಯ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದ ಕಡಬ ಎಂಬಲ್ಲಿಗೆ. ಅಲ್ಲಿನ ಹಳ್ಳಿ ಹಳ್ಳಿಗಳಲ್ಲೂ ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮವಿದೆ ಎಂದಾದರೆ, ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿದ್ದ ಕಾಲವದು. ಹೀಗಾಗಿ ಯಕ್ಷಗಾನದ ಕಾರ್ಯಕ್ರಮಗಳಿಗೇನೂ ಕೊರತೆಯಿರಲಿಲ್ಲ. ಅಲ್ಲಿನ ಪ್ರತಿ ಮನೆಯು ಕೂಡ ಯಕ್ಷಗಾನದ ಹಿಮ್ಮೇಳದ ಸದ್ದು ಮತ್ತು ಮುಮ್ಮೇಳದ ವಿದ್ವತ್‌ನಿಂದಲೇ ಬೆಳಗಿತ್ತು. ಮನೆ-ಮನಗಳು ಯಕ್ಷಗಾನದಿಂದಲೇ ಸಮೃದ್ಧವಾಗಿದ್ದವು. ಈಗಲೂ ಸುತ್ತಮುತ್ತ ತಾಳಮದ್ದಳೆಯ ಸದ್ದು ಆಗಾಗ್ಗೆ ಕೇಳಿಸುತ್ತಿರುತ್ತದೆ.

ಯಕ್ಷಗಾನಕ್ಕೆ ಬಂದಿದ್ದು ಹೇಗೆ? ಮುಂದಿನ ಪುಟ ಕ್ಲಿಕ್ ಮಾಡಿ...

ಹಿಂದಿನದು|ಮುಂದಿನದು