ನೂತನ ಯುಪಿಎ ಸರಕಾರದಿಂದ ಸಂಸತ್ತಿನಲ್ಲಿ ಜುಲೈ 6 ರಂದು ಮಂಡಿಸಲಿರುವ ಸಾರ್ವತ್ರಿಕ ಬಜೆಟ್ ಜನಪರವಾಗಿರಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.
ಕೇಂದ್ರದ ವಿತ್ತಖಾತೆ ಸಚಿವರಾದ ಪ್ರಣಬ್ ಮುಖರ್ಜಿ ಜನಪ್ರಿಯ ಬಜೆಟ್ ಮಂಡಿಸುತ್ತಾರೆ ಎನ್ನುವ ವಿಶ್ವಾಸವಿದ್ದು, ಬಜೆಟ್ ಮಂಡನೆಯಾಗುವವರೆಗೆ ರಹಸ್ಯವನ್ನು ಕಾಯ್ದುಕೊಳ್ಳುವ ಅಗತ್ಯವಿದೆ.ಬಜೆಟ್ ಮಂಡನೆಯಾಗುವವರೆಗೆ ನಿರೀಕ್ಷಿಸಿ ನೋಡಿ ಎಂದು ಉದ್ಯಮಿಗಳಿಗೆ ಮೊಂಟೆಕ್ ಹೇಳಿದ್ದಾರೆ.
ದೇಶದ ಅಭಿವೃದ್ಧಿ ಪಥದತ್ತ ಸಾಗಿಸಲು ಸರಕಾರ ಗಂಬೀರವಾದ ಪ್ರಯತ್ನ ಮಾಡುತ್ತಿದೆ. ಪ್ರಧಾನಿ ಮನಮೋಹನ್ ಸಿಂಗ್ ಎರಡು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.8 ರಿಂದ ಶೇ.9ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.ಆದರೆ ಅಭಿವೃದ್ಧಿಗಾಗಿ ದೃಢ ನಿರ್ಧಾರ, ಸೂಕ್ತ ನೀತಿಗಳು ಅಗತ್ಯವಾಗಿವೆ ಎಂದು ಮೊಂಟೆಕ್ ಅಭಿಪ್ರಾಯಪಟ್ಟಿದ್ದಾರೆ.
ಅಹಾರ ಭಧ್ರತೆ ಕಾಯ್ದೆಯಂತೆ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಕೆಜಿಗೆ 3 ರೂಪಾಯಿಯಂತೆ 25 ಕೆಜಿ ಅಕ್ಕಿ ಅಥವಾ ಗೋಧಿಗಳನ್ನು ವಿತರಿಸುವ ಯೋಜನೆ ಹಾಗೂ ಸರಕಾರದ ಕಾರ್ಯಕ್ರಮಗಳನ್ನು ,ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ರೂಪಿಸಿ ಎಂದು ಈಗಾಗಲೇ ವಿತ್ತ ಸಚಿವಾಲಯಕ್ಕೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ.
ವಿತ್ತಸಚಿವ ಪ್ರಣಬ್ ಮುಖರ್ಜಿ ಜುಲೈ 6 ರಂದು ಲೋಕಸಭೆಯಲ್ಲಿ 2009-10ರ ಬಜೆಟ್ ಮಂಡಿಸಲಿದ್ದು, ಜನಪರ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ ಎಂದು ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ತಿಳಿಸಿದ್ದಾರೆ. |