ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯು ಹಣದುಬ್ಬರ ಎರಡಂಕಿಗೆ ವರ್ಧನೆಗೊಳ್ಳಲು ಕಾರಣ ಎಂಬುದಾಗಿ ಸೂಚಿಸುವುದರೊಂದಿಗೆ, ಬೆಲೆ ಏರಿಕೆ ಹತೋಟಿಗೆ ತರುವ ನಿಟ್ಟಿನಲ್ಲಿ ಬೇಡಿಕೆ ಮತ್ತು ಪೂರೈಕೆ ಅಂತರವನ್ನು ಕಡಿಮೆಗೊಳಿಸಲು ಹೆಚ್ಚಿನ ಕ್ರಮ ಕೈಗೊಳ್ಳುವ ಸುಳಿವನ್ನು ಹಣಕಾಸು ಸಚಿವ ಚಿದಂಬರಂ ನೀಡಿದ್ದಾರೆ.
ಇದು ಅತ್ಯಂತ ಕಷ್ಟಕರ ಸಮಯವಾಗಿದೆ. ಇದರ ಬಗ್ಗೆ ಸರಕಾರಕ್ಕೆ ಅರಿವಿದೆ. ಇದರ ಬಗ್ಗೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸಾಧ್ಯವಾಗುವ ರೀತಿಯಲ್ಲಿ ಸರಕಾರವು ಪೂರೈಕೆ ಹೆಚ್ಚಳಕ್ಕೆ ಮತ್ತು ಬೆಲೆ ಇಳಿಕೆಗೆ ಶ್ರಮವಹಿಸಲಿದೆ ಎಂದು ಚಿದಂಬರಂ ತಿಳಿಸಿದ್ದಾರೆ.
ಆದರೆ, ಸರಕಾರ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಯಾವ ರೀತಿಯ ಕ್ರಮಕೈಗೊಳ್ಳಲಿದೆ ಎಂಬುದನ್ನು ಬಹಿರಂಗಪಡಿಸಲು ಹಣಕಾಸು ಸಚಿವರು ನಿರಾಕರಿಸಿದ್ದಾರೆ.
ಪೆಟ್ರೋಲ್, ಡೀಸೇಲ್ ಮತ್ತು ಅಡುಗೆ ಅನಿಲ ಬೆಲೆಯನ್ನು ಏರಿಕೆಗೊಳಿಸುವ ಸಂದರ್ಭದಲ್ಲಿ ಹಣದುಬ್ಬರವು ಎರಡಂಕಿ ತಲುಪಲಿದೆ ಎಂಬುದಾಗಿ ಸಂಸತ್ತಿಗೆ ಈ ಮೊದಲೇ ಎಚ್ಚರಿಕೆ ನೀಡಲಾಗಿತ್ತು ಎಂದು ಚಿದಂಬರಂ ಸುದ್ದಿಗಾರರಿಗೆ ತಿಳಿಸಿದರು.
ಜೂನ್ ಏಳಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು 13 ವರ್ಷಗಳಲ್ಲೇ ಅಧಿಕ ಮಟ್ಟದಲ್ಲಿ ಏರಿಕೆ ಕಂಡಿದ್ದು, ಪೆಟ್ರೋಲ್, ಡೀಸೇಲ್ ಮತ್ತು ಎಲ್ಪಿಜಿಯು ಈ ಏರಿಕೆಯಲ್ಲಿ ಶೇ.94ರಷ್ಟು ಭಾಗವನ್ನು ಹಂಚಿಕೊಂಡಿದೆ ಎಂದ ಚಿದಂಬರಂ ಈ ಏರಿಕೆಯನ್ನು ಮುಂಚಿತವಾಗಿಯೇ ನಿರೀಕ್ಷಿಸಲಾಗಿತ್ತು ಎಂದು ಹೇಳಿದ್ದಾರೆ.
|