ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ವೈ.ವಿ.ರೆಡ್ಡಿ. ಶನಿವಾರ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ, 13 ವರ್ಷಗಳಲ್ಲೇ ಅಧಿಕ ಮಟ್ಟಕ್ಕೇರಿದ ಹಣದುಬ್ಬರ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಹಣದುಬ್ಬರ ಹತೋಟಿಗೆ ಸರಕಾರವು ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಕುರಿತಾಗಿ ಸುಮಾರು 15-20 ನಿಮಿಷಗಳ ಕಾಲ ಸಿಂಗ್ ಅವರೊಂದಿಗೆ ರೆಡ್ಡಿ ಮಾತುಕತೆ ನಡೆಸಿರುವುದಾಗಿ ಮೂಲಗಳು ತಿಳಿಸಿದ್ದು, ಮಾತುಕತೆಯ ಪೂರ್ಣ ವರದಿಗಳು ಇನ್ನೂ ಲಭ್ಯವಾಗಿಲ್ಲ.
ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನೂ ಕೂಡಾ ರೆಡ್ಡಿ ಅವರು ಭೇಟಿ ಮಾಡಿದ್ದಾರೆ ಎಂಬ ವರದಿಗಳ ಹೊರತಾಗಿಯೂ, ಈ ಮಾತುಕತೆಗೆ ಸಮಾನವಾಗಿ ಬೆಲೆ ಏರಿಕೆ ನಿಯಂತ್ರಣದ ಕುರಿತು ಸರಕಾರದ ನಿರ್ಧಾರದ ಬಗ್ಗೆ ಹಣಕಾಸು ಸಚಿವಾಲಯವು ವಿವರಣೆ ನೀಡಲು ಪ್ರಾರಂಭಿಸಿದೆ.
ಇದು ದೇಶದ ಅತ್ಯಂತ ಕಷ್ಟಕರ ಸಮಯವಾಗಿದೆ. ಇದರ ಬಗ್ಗೆ ಸರಕಾರಕ್ಕೆ ಅರಿವಿದೆ. ಇದಕ್ಕಾಗಿ ಸರಕಾರವು ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹಣದುಬ್ಬರ ಎರಡಂಕಿ ತಲುಪಿದ ವರದಿಗಳಿಗೆ ಪ್ರತಿಕ್ರಿಯಿಸುತ್ತಾ ಹಣಕಾಸು ಸಚಿವರು ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದ್ದರು.
|