ಭಾರತದ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.11.05ಕ್ಕೆ ಏರಿರುವ ಬೆನ್ನಲ್ಲೇ, ಆತಂಕಗೊಳ್ಳಬೇಡಿ ಎಂಬುದಾಗಿ ಚಿದಂಬರಂ ದೇಶದ ಜನತೆಗೆ ಕರೆ ನೀಡಿದ್ದು, ಹಣದುಬ್ಬರದ ಮೇಲ್ಮುಖ ಪ್ರವೃತ್ತಿಯನ್ನು ಹತೋಟಿಗೆ ತರಲು ಸರಕಾರವು ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ವೈ.ವಿ.ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಈ ಹೇಳಿಕೆಯನ್ನು ನೀಡಿರುವ ಚಿದಂಬರಂ, ಶಾಂತಿಯಿಂದ ಇರುವಂತೆ ಮನವಿ ಮಾಡಿದ್ದಾರೆ.
ದೇಶದಲ್ಲಿ ಆಹಾರ ಪರಿಸ್ಥಿತಿಯು ತೃಪ್ತಿದಾಯಕವಾಗಿದ್ದು, ಆಹಾರ ಬೆಲೆಯನ್ನು ಕಡಿಮೆಗೊಳಿಸಲು ಅಕ್ಕಿ ಮತ್ತು ಗೋದಿ ಸಂಗ್ರಹಣೆಯನ್ನು ಸರಕಾರವು ಬಳಸಿಕೊಳ್ಳುತ್ತದೆ. ಅಲ್ಲದೆ, ಸಾರ್ವಜನಿಕ ಸರಬರಾಜು ವಿಧಾನ(ಪಿಡಿಎಸ್)ದ ಮೂಲಕ ಸಾಕಷ್ಟು ಅಕ್ಕಿ ಮತ್ತು ಗೋಧಿಯನ್ನು ಸರಬರಾಜು ಮಾಡುತ್ತದೆ ಎಂದು ಭರವಸೆ ನೀಡಿದ್ದಾರೆ.
ಜಾಗತಿಕವಾಗಿ ಏರುತ್ತಿರುವ ತೈಲ ಬೆಲೆಯು ದೇಶದ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಚಿದಂಬರಂ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
|