ನಾಗಾಲೋಟದ ಹಣದುಬ್ಬರ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ಭಿಗಿ ಧೋರಣೆಯಿಂದ ಎಲ್ಲಾ ಬ್ಯಾಂಕುಗಳು ಸಾಲ ಮತ್ತು ಠೇವಣಿಯ ಬಡ್ಡಿದರವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಪ್ರಮುಖ ಬ್ಯಾಂಕ್ ಮೂಲಗಳು ತಿಳಿಸಿವೆ.
ಇದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅನುಮತಿಯನ್ನು ನಿರೀಕ್ಷಿಸುತ್ತಿದ್ದು, ಬಡ್ಡಿದರ ಹೆಚ್ಚಳದ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಐಡಿಬಿಐ ಬ್ಯಾಂಕಿನ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕ ಯೋಗೇಶ್ ಅಗರ್ವಾಲಾ ತಿಳಿಸಿದ್ದಾರೆ.
ಎರಡಂಕಿ ತಲುಪಿದ ಹಣದುಬ್ಬರವನ್ನು ನಿಯಂತ್ರಿಸಲು, ಅಪೆಕ್ಸ್ ಬ್ಯಾಂಕಿನ ಮುಂದಿನ ಹಣಕಾಸು ಭಿಗಿ ಧೋರಣೆಯು ರೇಪೋ ದರ ಏರಿಕೆ ಅಥವಾ ನಗದು ಮೀಸಲು ಪ್ರಮಾಣ ಏರಿಕೆಯ ರೂಪದಲ್ಲಿರುವ ಸಾಧ್ಯತೆ ಇದೆ ಎಂದು ಅಗರ್ವಾಲಾ ಹೇಳಿದ್ದಾರೆ.
ನಗದು ಮೀಸಲು ಪ್ರಮಾಣ ಏರಿಕೆಯು ಬ್ಯಾಂಕುಗಳಿಗೆ ಸ್ವಲ್ಪ ಮಟ್ಟಿನ ಸಂಕೇತವನ್ನು ನೀಡಿದರೂ, ರೇಪೋ ದರವು ಬಡ್ಡಿದರ ಏರಿಕೆಯ ಪೂರ್ಣ ಸುಳಿವನ್ನು ನೀಡಿದೆ. ಇನ್ನೂ ಹೆಚ್ಚು ನೇರ ಅನುಮತಿಯನ್ನು ಆರ್ಬಿಐ ನೀಡುತ್ತದೆಯೇ ಎಂಬುದನ್ನು ಕಾಯಲಾಗುತ್ತಿದೆ ಎಂದು ಅಗರ್ವಾಲ ಸ್ಪಷ್ಟಪಡಿಸಿದ್ದಾರೆ.
ಕಾರ್ಪೋರೇಶನ್ ಬ್ಯಾಂಕಿನ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕ ಬಿ.ಸಾಂಬಮೂರ್ತಿ ಅವರೂ ಇದೇ ಅಭಿಪ್ರಾಯವನ್ನು ಹೊಂದಿದ್ದು, ಬ್ಯಾಂಕುಗಳ ಸಾಲ ಮತ್ತು ಠೇವಣಿ ಬಡ್ಡಿದರಗಳು ಮೇಲ್ಮುಖವಾಗಿ ಸಾಗುವುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
|