ಇನ್ನೂ ಕೆಲವು ವಾರಗಳವರೆಗೆ ದೇಶದ ಹಣದುಬ್ಬರವು ಎರಡಂಕಿಯಲ್ಲೇ ಮುಂದುವರಿಯಲಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.
ನಾಳೆ ಹೊರಬೀಳಲಿರುವ ಹಣದುಬ್ಬರ ಅಂಕಿಅಂಶದ ಮುಂದಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ಅವರು, ಹಣದುಬ್ಬರದ ಬಗ್ಗೆ ಏನನ್ನೂ ಹೇಳಲಾರೆ ಆದರೆ ಕೆಲವು ವಾರಗಳವರೆಗೆ ಎರಡಂಕಿಯಲ್ಲಿಯೇ ಮುಂದುವರಿಯುವುದು ಸ್ಪಷ್ಟವಾಗಿದೆ ಎಂದರು.
ಏನೇ ಆದರೂ, ಹಣದುಬ್ಬರ ಏರಿಕೆಯಿಂದ ಯುಪಿಎ ಸರಕಾರಕ್ಕೆ ಧಕ್ಕೆ ಮಾಡುವ ಸಾಧ್ಯತೆ ಇಲ್ಲ ಎಂದ ಅವರು, ಶೀಘ್ರಚುನಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಮುಂಚಿತ ಚುನಾವಣೆ ನಡೆಸುವುದು ಆತುರದ ನಿರ್ಧಾರವಾಗುತ್ತದೆ. ಹಣದುಬ್ಬರದ ಬಗ್ಗೆ ಕೇಂದ್ರ ಸರಕಾರವು ಆತಂಕವನ್ನು ಹೊಂದಿದೆ ಮತ್ತು ಇದರ ಹತೋಟಿಗೆ ಕ್ರಮ ಕೈಗೊಳ್ಳಲಿದೆ. ಬೆಲೆಗಳು ಯಾಕೆ ಹೆಚ್ಚಾಗುತ್ತವೆ ಎಂಬುದನ್ನು ತಿಳಿದುಕೊಳ್ಳಲು ಜನರೊಂದಿಗೆ ಸಂವಹನ ನಡೆಸಬೇಕು ಎಂದು ಅವರು ಹೇಳಿದರು.
ಜಾಗತಿಕ ಕಚ್ಛಾತೈಲ ಬೆಲೆ ಏರಿಕೆಯ ಫಲವಾಗಿ ದೇಶದ ಸಗಟು ಬೆಲೆ ಆಧಾರಿತ ಹಣದುಬ್ಬರವು ಜೂನ್ ಏಳಕ್ಕೆ ಅಂತ್ಯಗೊಂಡ ವಾರದಲ್ಲಿ ಶೇ.11.05ರಷ್ಟು ಏರಿಕೆ ಕಂಡಿತ್ತು.
|