ಭಾರತಕ್ಕೆ ಕಚ್ಛಾರೇಶ್ಮೆ ಪೂರೈಸುವ ಮುಖ್ಯ ಕೇಂದ್ರವಾಗಿರುವ ಚೀನಾದಲ್ಲಿ ಕಳೆದ ತಿಂಗಳು ಉಂಟಾಗಿದ್ದ ಭೂಕಂಪದಿಂದಾಗಿ, ವಾರ್ಷಿಕವಾಗಿ ಸುಮಾರು 10,000 ಕೋಟಿ ವ್ಯವಹಾರ ನಡೆಸುತ್ತಿದ್ದ ಭಾರತೀಯ ರೇಶ್ಮೆ ಉದ್ಯಮಕ್ಕೆಅತ್ಯಂತ ನಷ್ಟ ಉಂಟಾಗಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.
ರೇಶ್ಮೆ ಉತ್ಪನ್ನಗಳ ವೆಚ್ಚವು ಶೇ.40ರಷ್ಟು ಹೆಚ್ಚಳಗೊಂಡ ಕಾರಣ ವಾರಣಾಸಿ, ಮಧುರೈ, ಕೊಯಂಬತ್ತೂರು, ಭಾಗಾಲ್ಪುರ್ ಮುಂತಾದ ಕಡೆಗಳಲ್ಲಿನ ನೂರಾರು ರೇಶ್ಮೆ ಕೇಂದ್ರಗಳು ಮುಚ್ಚಲ್ಪಟ್ಟಿದ್ದು, ಸುಮಾರು 1000 ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಉದ್ಯಮವು ತಿಳಿಸಿದೆ.
ಚೀನಾವು ಭಾರತಕ್ಕೆ ಕಚ್ಛಾರೇಶ್ಮೆಯನ್ನು ಪೂರೈಸುವ ಮುಖ್ಯ ಕೇಂದ್ರವಾಗಿದ್ದು, ಚೀನಾದಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದಿಂದಾಗಿ ಹೆಚ್ಚಿನ ಮಲ್ಬರಿ ತೋಟಗಳು ನಾಶ ಹೊಂದಿದ್ದು, ಇದು ಭಾರತದಲ್ಲಿ ಉತ್ಪಾದನೆ ಇಳಿಕೆಗೆ ಕಾರಣವಾಗಿದೆ.
ಚೀನಾದಲ್ಲಿ ಭೂಕಂಪ ಮತ್ತು ನಿರಂತರ ನೆರೆಯು ಆಮದು ಬೆಲೆಯ ಮೇಲೆ ಪರಿಣಾಮ ಬೀರಿದ್ದು, ಶೇ.30ರಿಂದ 40ರಷ್ಟು ಏರಿಕೆಗೊಂಡಿದೆ ಎಂದು ಭಾರತೀಯ ರೇಶ್ಮೆ ರಫ್ತು ವ್ಯಾಪಾರ ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ಟಿ.ವಿ.ಮಾರುತಿ ತಿಳಿಸಿದ್ದಾರೆ.
ಇದರೊಂದಿಗೆ, ಕಾರ್ಮಿಕ ಮತ್ತು ಇತರ ವೆಚ್ಚದೊಂದಿಗೆ, ತೈಲ ಬೆಲೆ ಏರಿಕೆಯಿಂದಾಗಿ ಸಾಗಾಣಿಕೆ ವೆಚ್ಚದ ಹೆಚ್ಚಳದಿಂದಲೂ ಉದ್ಯಮವು ತತ್ತರಿಸುತ್ತಿದೆ ಎಂದು ಅವರು ಹೇಳಿದರು.
|