ಕಳೆದೊಂದು ದಶಕದಲ್ಲಿ ಭಾರತೀಯ ಆಹಾರ ನಿಗಮದ ದಾಸ್ತನು ಮಳಿಗೆಗಳಲ್ಲಿ ಹತ್ತು ಲಕ್ಷ ಟನ್ಗಿಂತಲೂ ಅಧಿಕ ಆಹಾರ ಧಾನ್ಯ ಹಾಳಾಗಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಇಷ್ಟು ಪ್ರಮಾಣದ ಆಹಾರವು ಒಂದು ವರ್ಷದಲ್ಲಿ ಒಂದು ಕೋಟಿ ಮಂದಿಯ ಹಸಿವನ್ನು ನೀಗಿಸಲು ಸಾಕಾಗುತ್ತಿತ್ತು.
ಭಾರತೀಯ ಆಹಾರ ನಿಗಮವು 242 ಕೋಟಿ ರೂಪಾಯಿಗಳನ್ನು ದಾಸ್ತನು ಸಂದರ್ಭದಲ್ಲಿ ಆಹಾರ ಧಾನ್ಯಗಳು ಹಾಳಾಗದಂತೆ ರಕ್ಷಿಸಲು ವಿನಿಯೋಗಿಸುತ್ತಿದ್ದರೂ ಈ ಹಾನಿಯುಂಟಾಗಿದೆ. ವ್ಯವಸ್ಥೆಯ ವ್ಯಂಗ್ಯವೆಂದರೆ, 2.59 ಕೋಟಿ ರೂಪಾಯಿಗಳನ್ನು ಕೊಳೆತ ಆಹಾರ ಧಾನ್ಯಗಳನ್ನು ನಾಶಪಡಿಸಲು ಬಳಸುತ್ತಿದೆ.
ಮಾಹಿತಿ ಹಕ್ಕು ಕಾಯಿದೆ ಪ್ರಕಾರ ದಿಲ್ಲಿ ನಿವಾಸಿಯೊಬ್ಬರು ಮನವಿ ಸಲ್ಲಿಸಿದ ವೇಳೆ ಈ ಕುತೂಹಲ ಕಾರಿ ಅಂಕಿಅಂಶಗಳು ಹೊರಬಿದ್ದಿವೆ. ರಾಷ್ಟ್ರಾದ್ಯಂತ ಆಹಾರ ಧಾನ್ಯವನ್ನು ವಿತರಿಸುವ ಜವಾಬ್ದಾರಿ ಹೊಂದಿರುವ ಸರಕಾರಿ ಸಂಸ್ಥೆಯು ಈ ಹಾನಿಗೆ ಜವಾಬ್ದಾರಿಯಾಗಿದೆ ಎಂದು ನಿಗಮವು ಹೇಳಿದೆ.
ಇತ್ತೀಚೆಗೆ ವಿಶ್ವಸಂಸ್ಥೆಯ ವರದಿಯೊಂದು ಭಾರತದಲ್ಲಿ ಶೇ.63 ಮಕ್ಕಳು ಹಸಿದ ಹೊಟ್ಟೆಯಲ್ಲಿಯೇ ನಿದ್ದೆ ಮಾಡುತ್ತಾರೆ ಎಂಬ ಅಂತಕರಣ ಕಲಕುವ ವರದಿ ನೀಡಿದ ಸಂದರ್ಭದಲ್ಲೇ ಈ ಆಘಾತಕಾರಿ ವಿಚಾರ ಹೊರಬಿದ್ದಿದೆ.
|