ಸರಿಯಾದ ದೃಷ್ಟಿಕೋನ ಮತ್ತು ತಾಳ್ಮೆಯು ಹಣದುಬ್ಬರ ಏರಿಕೆಯಂತಹ ದೇಶದ ಹಲವು ಸಮಸ್ಯೆಗಳನ್ನು ಎದುರಿಸಲು ಸಹಾಯವಾಗಲಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದ್ದು, ಭಾರತದ ಆರ್ಥಿಕತೆಯು ಚೇತರಿಸಿಕೊಳ್ಳಲಿದೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ಭಾರತದಂತಹ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಸೂಕ್ತ ನಿಲುವು, ತಾಳ್ಮೆ ಮತ್ತು ಸಹಿಷ್ಣುತೆಯು ಈ ಸಮಸ್ಯೆಯಿಂದ ಹೊರಬರಲು ಸಹಾಯಕವಾಗಲಿದೆ ಎಂದು ಅವರು ಹೇಳಿದ್ದಾರೆ.
1997-98ರ ಏಶಿಯನ್ ಹಣಕಾಸು ಬಿಕ್ಕಟ್ಟು, 1989-90ರ ವಿದೇಶಿ ವಿನಿಮಯ ಮೀಸಲು ಬಿಕ್ಕಟ್ಟು ಮುಂತಾದ ಸಮಸ್ಯೆಗಳನ್ನು ದೇಶವು ಎದುರಿಸಿರುವಾಗ, ಪ್ರಸಕ್ತ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವೇನಲ್ಲ ಎಂಬುದಾಗಿ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಏನೇ ಆದರೂ, ಜಾಗತಿಕವಾಗಿ ಏರುತ್ತಿರುವ ಕಚ್ಚಾತೈಲ ಬೆಲೆಯು ಉತ್ಪನ್ನ ಮತ್ತು ಮೆಟಲ್ಗಳ ಬೆಲೆಯ ಮೇಲೆ ಪರಿಣಾಮ ಬೀರಿದ್ದು, ಇದು ಹಣದುಬ್ಬರ ಏರಿಕೆಗೆ ಕಾರಣವಾಗಿದೆ ಎಂದು ಅವರು ಪುನರುಚ್ಛರಿಸಿದ್ದಾರೆ.
|