ದೇಶದ ಏರ್ಲೈನ್ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಮತ್ತು ಏರ್ಲೈನ್ ಅಭಿವೃದ್ಧಿ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಶಿಫಾರಸ್ಸು ಮಾಡುವ ನಿಟ್ಟಿನಲ್ಲಿ, ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸಲು ಸರಕಾರವು ನಿರ್ಧರಿಸಿದೆ.
ಜಾಗತಿಕ ಕಚ್ಛಾತೈಲ ಬೆಲೆ ಏರಿಕೆ ಹಾಗೂ ಎಟಿಎಫ್ ಇಂಧನ ಬೆಲೆ ಹೆಚ್ಚಳದಿಂದಾಗಿ ಭಾರತದ ವಿಮಾನಯಾನ ಉದ್ಯಮವು ಬ್ರಹತ್ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿದೆ.
ವಿಮಾನಯಾನ ಉದ್ಯಮದ ವಿವಿಧ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಲು ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ನೇತೃತ್ವದಲ್ಲಿ ಭಾರತೀಯ ವಿಮಾನಯಾನ ಉದ್ಯಮದ ನಾಯಕರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದ ನಂತರ ಸರಕಾರವು ಈ ನಿರ್ಧಾರವನ್ನು ಕೈಗೊಂಡಿದೆ.
ಭಾರತದ ಏರ್ಲೈನ್ ಉದ್ಯಮವು ಕಳೆದ ವರ್ಷ ಸುಮಾರು 4,000 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.
ಸಂಸತ್ ಕಾರ್ಯದರ್ಶಿ ನೇತೃತ್ವದ ಈ ಸಮಿತಿಯು, ಹಣಕಾಸು, ವಿಮಾನಯಾನ, ಆದಾಯ, ಪೆಟ್ರೋಲಿಯಂ ಸಚಿವಾಲಯದ ಹಾಗೂ ಯೋಜನಾ ಆಯೋಗದ ಕಾರ್ಯದರ್ಶಿಗಳು, ಐಡಿಎಫ್ಸಿ ಅಧ್ಯಕ್ಷ ದೀಪಕ್ ಪರೇಕ್ ಮತ್ತು ಅಹ್ಮದಾಬಾದ್ ಐಐಎಂ ಪ್ರೊಫೆಸರ್ ಡಾ.ರಘುರಾಂ ಮುಂತಾದವರನ್ನೊಳಗೊಂಡಿದೆ.
|