ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಸೋಮವಾರದಿಂದ ಖಾದ್ಯ ತೈಲವನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಿಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಸಬ್ಸಿಡಿ ಮೊತ್ತ ಸುಮಾರು 1500 ಕೋಟಿ ರೂ.ಗೆ ಅಧಿಕವಾಗಲಿದೆ.
ಈ ಯೋಜನೆಯನ್ನು ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಅವರು, ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆಯ ತಂದೂರ್ ಗ್ರಾಮದಲ್ಲಿ ಜು.28ರಂದು ಉದ್ಘಾಟಿಸಿ, ಚಾಲನೆ ನೀಡಲಾಗುವುದು ಎಂದು ನವದೆಹಲಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ಬೆಲೆ ಹೆಚ್ಚಳದಿಂದಾಗಿ ಪರಿತಪಿಸುತ್ತಿರುವ ಬಡ ಜನರ ನೆರವಿಗೆ ಬರಲು ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ 2008-09ರಲ್ಲಿ ಸುಮಾರು 10 ಲಕ್ಷ ಟನ್ ತೈಲವನ್ನು ವಿತರಿಸಲಾಗುವುದು.
ಸಾರ್ವಜನಿಕ ವಿತರಣೆಯನ್ನು ರಾಜ್ಯ ಸರ್ಕಾರಗಳು ಕೈಗೊಳ್ಳಲಿದ್ದು, ಈ ಯೋಜನೆಯಡಿಯಲ್ಲಿ ವಿತರಿಸಲಾಗುವ ಒಂದು ಕಿಲೋ ತೈಲವನ್ನು, ಹದಿನೈದು ರೂ.ಗಳ ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಯೋಜನೆಗಾಗಿ ಬೇಡಿಕೆಯನ್ನು ಸಲ್ಲಿಸಿರುವ ಎಲ್ಲಾ ರಾಜ್ಯ ಸರ್ಕಾರಗಳಿಗೂ, ಖಾದ್ಯ ತೈಲವನ್ನು ಆಹಾರ ಮತ್ತು ಸಾರ್ವಜನಿಕ ವಿತರಣೆಯ ಮೂಲಕ ನೀಡುವ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದೆ.
|