ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯೂಟಿಒ) ಮಾತುಕತೆಯು ಕೇವಲ ಅಭಿವೃದ್ಧಿ ದೇಶಗಳ ಏಳಿಗೆಯತ್ತ ಮಾತ್ರ ದೃಷ್ಟಿ ಹಾಯಿಸದೆ, ವಿಶ್ವದ ಬಡತನ ನಿರ್ಮೂಲನೆಯತ್ತವೂ ಗಮನ ಹರಿಸಬೇಕು ಎಂದು ವಾಣಿಜ್ಯ ಮತ್ತು ಉದ್ಯಮ ಸಚಿವ ಕಮಲನಾಥ್ ಅಭಿಪ್ರಾಯಿಸಿದ್ದಾರೆ.
ನವದೆಹಲಿಯಲ್ಲಿ 'ಜಾಗತಿಕ ಪಾಲುದಾರಿಕೆ ಮತ್ತು ಅಭಿವೃದ್ಧಿ' ಕುರಿತಾದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಮಲನಾಥ್, ಜಾಗತಿಕ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಮಾನ ವ್ಯಾಪ್ತಿಯನ್ನು ನೀಡುವ ಉದ್ದೇಶದಿಂದ ಭಾರೀ ಪ್ರಮಾಣದ ಕೃಷಿ ಸಹಾಯಧನವನ್ನು ಕಡಿತಗೊಳಿಸುವಂತೆ ಅಭಿವೃದ್ಧಿ ದೇಶಗಳಿಗೆ ಕರೆ ನೀಡಿದ್ದಾರೆ.
ವಿಶ್ವದಲ್ಲಿ ಸಮಾನತೆ ಉತ್ತೇಜನ ವಿಶ್ವ ವ್ಯಾಪಾರ ಸಂಸ್ಥೆಯ ಮುಖ್ಯ ಗುರಿಯಾಗಲಿ ಎಂದು ಕಮಲನಾಥ್ ಹೇಳಿದ್ದಾರೆ.
ದೋಹಾ ಸುತ್ತಿನ ಮಾತುಕತೆಯ ಕುರಿತಾಗಿ ಇದೇ ವೇಳೆ ಪ್ರತಿಕ್ರಯಿಸಿದ ಅವರು, ಇದೊಂದು ತಾತ್ಕಾಲಿಕ ವಿರಾಮವಾಗಿದ್ದು, ಒಪ್ಪಂದ ಮಾತುಕತೆಯ ಕೊನೆಯಲ್ಲ ಎಂದು ಒತ್ತಿ ಹೇಳಿದರು.
ವಿಶ್ವದ ರಾಜಕೀಯ ಮತ್ತು ಆರ್ಥಿಕ ಮಟ್ಟದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದರಿಂದ, ಪ್ರಸಕ್ತ ದೋಹಾ ಸುತ್ತಿನ ಮಾತುಕತೆಯು ಈ ಹಿಂದಿನ ಮಾತುಕತೆಗಿಂತ ಭಿನ್ನವಾಗಿತ್ತು ಎಂದು ತಿಳಿಸಿದರು.
|