ನವದೆಹಲಿ: ಸುಮಾರು ದಶಕಗಳ ಕಾಲದ ಸ್ಥಗಿತತೆಯ ಬಳಿಕ ಕೃಷಿವಲಯವು ಮತ್ತೆ ಹಸಿರಾಗಿ ನಳನಳಿಸುತ್ತಿದೆ ಮತ್ತು ರೈತರು ಹೊರೆ ಮುಕ್ತರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಸ್ವಾತಂತ್ರ್ಯೋತ್ಸವ ವೇಳೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಹೆಚ್ಚೂಕಮ್ಮಿ ಒಂದು ದಶಕ ಅಂದರೆ, 1998-2004ರ ಸ್ಥಗಿತತೆಯ ಬಳಿಕ, ಇದೀಗ ಕೃಷಿವಲಯದಲ್ಲಿ ಹೂಡಿಕೆ ಹೆಚ್ಚುತ್ತಿದೆ ಮತ್ತು ಈ ವ್ಯಾಪ್ತಿಯ ಪುನಶ್ಚೇತನವಾಗುತ್ತಿದೆ ಎಂದು ನುಡಿದರು.
"ನಮ್ಮ ರೈತರು ಮತ್ತೆ ಹಸಿರಾಗುತ್ತಿದ್ದಾರೆ. ನಮ್ಮ ಗೋಡಾನ್ಗಳು ಮತ್ತೆ ತುಂಬುತ್ತಿವೆ. ನಮ್ಮ ರೈತರು ತಮ್ಮ ಭವಿಷ್ಯ ಮತ್ತು ಕಲ್ಯಾಣದ ಬಗ್ಗೆ ಮತ್ತೊಮ್ಮೆ ಆಶಾವಾದ ಹೊಂದಿದ್ದಾರೆ" ಎಂದು ಅವರು ನುಡಿದರು.
2007-08ರ ವೇಳೆಗೆ ಆಹಾರ ಧಾನ್ಯ, ಹತ್ತಿ ಮತ್ತು ಕಬ್ಬು ಬೆಳೆಯಲ್ಲಿ ದಾಖಲೆಯ ಉತ್ಪಾದನೆ ಪಡೆದಿದ್ದೇವೆ ಎಂದು ಅವರು ಹೇಳಿದ್ದಾರೆ.
ಸರಕಾರವು ಸುಮಾರು 71 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಿದೆ ಎಂದು ಪ್ರಧಾನಿ ಅವರು ಈ ಸಂದರ್ಭದಲ್ಲಿ ನುಡಿದರು. ಅಲ್ಲದೆ ರಾಷ್ಟ್ರೀಯ ಕಿಸಾನ್ ವಿಕಾಸ್ ಯೋಜನೆಯಲ್ಲಿ ಕೃಷಿವಲಯದಲ್ಲಿ 25 ಸಾವಿರಕೋಟಿ ರೂಪಾಯಿ ಹೂಡಿಕೆಯಾಗುತ್ತಿದೆ ಎಂದು ಅವರು ತಿಳಿಸಿದರು.
|