ಉತ್ತರಪ್ರದೇಶದ ಬ್ಯಾಂಕಿನಲ್ಲಿ ಖೋಟಾನೋಟು ಪತ್ತೆಯಾಗಿರುವ ನಂತರ, ಖೋಟಾನೋಟು ಸಮಸ್ಯೆಯನ್ನು ನಿಗ್ರಹಗೊಳಿಸುವ ನಿಟ್ಟಿನಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸಲು ಹಣಕಾಸು ಸಂಸ್ಥೆಗಳಿಗೆ ಮತ್ತು ರಕ್ಷಣಾ ಸಂಸ್ಥೆಗಳಿಗೆ ಗೃಹ ಸಚಿವಾಲಯವು ಕರೆ ನೀಡಿದೆ.
ಉತ್ತರ ಪ್ರದೇಶದ ಕುಗ್ರಾಮದಲ್ಲಿರುವ ಎಸ್ಬಿಐ ಶಾಖೆಯಲ್ಲಿನ ಖೋಟಾನೋಟು ಪ್ರಕರಣವು, ಖೋಟಾನೋಟು ಚಲಾವಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಕೇಂದ್ರದ ನಿರ್ಧಾರದ ಹಿಂದಿನ ಮುಖ್ಯ ಕಾರಣವಾಗಿದೆ.
ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಉನ್ನತ ಮಟ್ಟದ ಸಭೆಯನ್ನು ಗೃಹ ಕಾರ್ಯದರ್ಶಿ ಕರೆದಿದ್ದು, ಹಣಕಾಸು ಸಂಸ್ಥೆ ಮತ್ತು ಗುಪ್ತಚರ ಸಂಸ್ಥೆಗಳ ನಡುವೆ ಸಹಕಾರವನ್ನು ವೃದ್ಧಿಸಲು ಈ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಪ್ರಸಕ್ತ ವರ್ಷದಲ್ಲಿ ಈವರೆಗೆ, ದೆಹಲಿ ಪೊಲೀಸರು ಸುಮಾರು 67 ಲಕ್ಷ ರೂಪಾಯಿ ಖೋಟಾನೋಟನ್ನು ವಶಪಡಿಸಿಕೊಂಡಿದ್ದಾರೆ.
ಆದರೆ, ಇದರಲ್ಲಿ ಹೆಚ್ಚಿನ ಖೋಟಾನೋಟುಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿತ್ತು ಎಂದು ದೆಹಲಿ ಪೊಲೀಸ್ ಅಧಿಕಾರಿ ಕರ್ನೈಲ್ ಸಿಂಗ್ ತಿಳಿಸಿದ್ದಾರೆ.
ಸುಮಾರು 40,000 ರೂಪಾಯಿಯಷ್ಟು ಖೋಟಾನೋಟು ಹೊಂದಿರುವ ಆರೋಪದಲ್ಲಿ ಫೆಬ್ರವರಿ 2006ರಲ್ಲಿ ಇಬ್ಬರು ಹುಜಿ ಉಗ್ರಗಾಮಿಗಳನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು.
|