ಕೋಲ್ಕತಾ : ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ನಿರಂತರ ಪ್ರತಿಭಟನೆ ಹಾಗೂ ಹಿಂಸಾಚಾರದ ಘಟನೆಗಳು ಮುಂದುವರಿದಲ್ಲಿ ನ್ಯಾನೊ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸದೇ ಬೇರೆ ದಾರಿಯಿಲ್ಲ ಎಂದು ಟಾಟಾ ಮೋಟಾರ್ಸ್ ಮುಖ್ಯಸ್ಥ ರತನ್ ಟಾಟಾ ಪಶ್ಚಿಮ ಬಂಗಾಳ ಸರಕಾರಕ್ಕೆ ಬೆದರಿಕೆ ಒಡ್ಡಿದ್ದಾರೆ.
ನಿರಾಶರಾದಂತೆ ಕಂಡು ಬಂದ ರತನ್ ಟಾಟಾ, ಭಾರಿ ಹಾನಿ ಸಂಭವಿಸಿದರೂ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲು ಹಿಂದೆ ನೋಡುವುದಿಲ್ಲ ಎಂದು ಸ್ಪಷ್ಟಪಡಿಸಿ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ದಿನನಿತ್ಯ ಪ್ರತಿಭಟನೆ ,ಹಿಂಸಾಚಾರದಂತಹ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದು. ಅನಗತ್ಯವಾದ ಸ್ಥಳದಲ್ಲಿ ನಾವು ಕೆಲಸ ಮಾಡಲು ಬಯಸುವುದಿಲ್ಲ ಎಂದು ಒಂದು ಲಕ್ಷರೂ.ಗಳಿಗೆ ನ್ಯಾನೊ ಕಾರನ್ನು ನೀಡುವುದಾಗಿ ಹೇಳಿ ಜಗತ್ತನ್ನೆ ಅಚ್ಚರಿಗೆ ತಳ್ಳಿದ್ದ ರತನ್ ಟಾಟಾ ಹೇಳಿದ್ದಾರೆ.
ನ್ಯಾನೊ ಘಟಕ ನಿರ್ಮಾಣಕ್ಕೆ ಭಾರಿ ಹೂಡಿಕೆ ಮಾಡಿದ್ದು ಘಟಕವನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಯಾರಾದರೂ ಉಹಿಸಿದಲ್ಲಿ ಅದು ಖಂಡಿತ ತಪ್ಪು. ನಮ್ಮ ಉದ್ಯೋಗಿಗಳ ಸುರಕ್ಷತೆಯೊಂದಿಗೆ ರಾಜಿ ಮಾಡಲಾಗದು ಎಂದು ಟಾಟಾ ಹೇಳಿದ್ದಾರೆ.
|