ಟಾಟಾ ನ್ಯಾನೋ ಕಾರು ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ 400 ಎಕರೆ ಜಮೀನನ್ನು ರೈತರಿಗೆ ಹಿಂತಿರುಗಿಸಲು ಸಾಧ್ಯವಿಲ್ಲದಿದ್ದರೆ, ನ್ಯಾನೋ ಯೋಜನೆ ಸಿಂಗೂರಿನಿಂದ ತೆರಳಲಿ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ, ಬೆಂಕಿಚೆಂಡು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"400 ಎಕರೆ ಜಮೀನನ್ನು ಹಿಂತಿರುಗಿಸಲು ಸಾಧ್ಯವಿಲ್ಲ. ಒಂದು ವೇಳೆ ಅದನ್ನು ಹಿಂತಿರುಗಿಸಿದಲ್ಲಿ, ಟಾಟಾ ಮೋಟಾರ್ಸ್ ಯೋಜನೆಯು ಸ್ಥಗಿತಗೊಳ್ಳುತ್ತದೆ. ಹಾಗಾಗುವುದು ನನಗೆ ಇಷ್ಟವಿಲ್ಲ" ಎಂಬುದಾಗಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಮಂಗಳವಾರ ಹೇಳಿದ್ದರು.
ಭಟ್ಟಾಚಾರ್ಯ ಅವರ ಈ ಹೇಳಿಕೆಯ ಬೆನ್ನಲ್ಲೇ, ರೊಚ್ಚಿಗೆದ್ದಿರುವ ಮಮತಾ, ಶುಕ್ರವಾರದಂದು ಎರಡು ಗಂಟೆಗಳ ಕಾಲ ರಾಜ್ಯಾದ್ಯಂತ ರಸ್ತೆ ತಡೆಗೆ ಕರೆ ನೀಡಿದ್ದಾರೆ.
ನ್ಯಾನೋ ಕಾರು ಪ್ರಾರಂಭಗೊಳ್ಳಬೇತು ಮತ್ತು ಕೃಷಿ ಭೂಮಿ ಉಳಿಯಬೇಕು ಇಲ್ಲವಾದಲ್ಲಿ, ನ್ಯಾನೋ ಸ್ಥಗಿತಗೊಳ್ಳಬೇಕು ಮತ್ತು ಕೃಷಿ ಭೂಮಿ ಉಳಿಯಬೇಕು ಎಂದು ಮಮತಾ ಪಟ್ಟು ಹಿಡಿದಿದ್ದಾರೆ. ಟಾಟಾ ಮೋಟಾರ್ಸ್ ಯೋಜನೆ ಸ್ಥಾವರ ಮೇಲಿನ ತೃಣಮೂಲ ಕಾಂಗ್ರೆಸ್ ಮುತ್ತಿಗೆಯು ವಿಶ್ವದ ಅತಿ ಅಗ್ಗದ ಕಾರು ನಿರ್ಮಾಣಕ್ಕೆ ತಡೆ ಉಂಟುಮಾಡಿದೆ.
ಪ್ರಸ್ತುತ ಸಿಂಗಾಪುರದಲ್ಲಿರುವ ಕೇಂದ್ರ ಉದ್ಯಮ ಮತ್ತು ವಾಣಿಜ್ಯ ಸಚಿವ ಕಮಲನಾಥ್, ಸಿಂಗೂರ್ ಭೂಮಿ ವಿವಾದವನ್ನು ಬಗೆಹರಿಸಲು ಕೇಂದ್ರವು ಮಧ್ಯಪ್ರವೇಶಿಸಬೇಕಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ.
ಇದೇ ರೀತಿ ಪ್ರತಿಭಟನೆ ಮುಂದುವರಿದಲ್ಲಿ, 1,500 ಕೋಟಿ ರೂಪಾಯಿ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಕಳೆದ ವಾರ ಬೆದರಿಕೆಯೊಡ್ಡಿದ್ದರು,
ರೈತರಿಗೆ ಜಮೀನನ್ನು ಹಿಂತಿರುಗಿಸಬೇಕೆಂಬ ತನ್ನ ಪಕ್ಷದ ಬೇಡಿಕೆಯನ್ನು ಪೂರೈಸುವವರೆಗೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಮಮತಾ ಪ್ರತಿ ಹೇಳಿಕೆ ನೀಡಿದ್ದಾರೆ.
|