ಸಿಂಗೂರಿನಲ್ಲಿ ಜಮೀನನ್ನು ರೈತರಿಗೆ ಹಿಂತಿರುಗಿಸಬೇಕೆನ್ನುವ ಬೇಡಿಕೆಯೊಡ್ಡಿ ತೃಣಮೂಲ ಕಾಂಗ್ರೆಸ್ ನಡೆಸುತ್ತಿರುವ ಧರಣಿ ಮುಂದುವರಿಯುತ್ತಿರುವುದರೊಂದಿಗೆ, ಶುಕ್ರವಾರ ನ್ಯಾನೋ ಕಾರ್ಯವು ಸ್ಥಗಿತಗೊಂಡಿದ್ದು, ಟಾಟಾ ಮೋಟಾರ್ಸ್ ಸಣ್ಣ ಕಾರು ಸ್ಥಾವರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
"ನ್ಯಾನೋ ಯೋಜನೆಯಿಂದಾಗಿ ನಮಗೆ ಉದ್ಯೋಗ ದೊರೆತಿದೆ. ಈಗ ಈ ಪ್ರತಿಭಟನೆಯು ನಮ್ಮ ಉದ್ಯೋಗದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿದೆ. ಒಂದು ವೇಳೆ ಕಾರ್ಖಾನೆಯು ಬಲಾತ್ಕಾರವಾಗಿ ಮುಚ್ಚಲ್ಪಟ್ಟಲ್ಲಿ, ಪ್ರತಿಭಟನಾಕಾರರು ನಮಗೆ ಬೇರೆ ಉದ್ಯೋಗ ಕೊಡಿಸುತ್ತಾರೆಯೇ?" ಎಂಬುದಾಗಿ ನ್ಯಾನೋ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸಿಂಗೂರ್ ನಿವಾಸಿ ದೇವ್ದಾಸ್ ಬ್ಯಾನರ್ಜಿ ಕೇಳುತ್ತಾರೆ.
ದೇವ್ದಾಸ್ ಅವರಂತೆ, ಸೌವಿಕ್ ಪಾತ್ರಾ, ಹಿಮಾದ್ರಿ ಪಾಲ್ ಮುಂತಾದವರು ಪ್ರತಿಭಟನೆ ಅಂತ್ಯಗೊಳ್ಳುವುದನ್ನು ನಿರೀಕ್ಷಿಸುತ್ತಿದ್ದಾರೆ. ನಾವು ಸ್ಥಳೀಯರಾಗಿದ್ದು, ನ್ಯಾನೋ ಕಾರ್ಖಾನೆಯಲ್ಲಿ ಕೆಲಸ ಮಾಡುವ ಹಕ್ಕಿದೆ. ಹೊರಗಿನವರು ನಮ್ಮ ಪ್ರದೇಶವನ್ನು ವಶಪಡಿಸಿಕೊಂಡು ನಮ್ಮನ್ನು ಕಾರ್ಯಸ್ಥಳದಿಂದ ದೂರಮಾಡುತ್ತಿದ್ದಾರೆ ಎಂದು ನ್ಯಾನೋ ಕಾರ್ಖಾನೆಯ ತರಬೇತಿ ನೌಕರರೊಬ್ಬರು ಆಪಾದಿಸಿದ್ದಾರೆ.
ನ್ಯಾನೋ ಕಾರ್ಖಾನೆಯ ಕಾರ್ಯವು ಶುಕ್ರವಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಯಾವುದೇ ನೌಕರರು ಕೆಲಸಕ್ಕೆ ಹಾಜರಾಗಿಲ್ಲ. ಕಾವೇರುತ್ತಿರುವ ಪ್ರತಿಭಟನೆಯು ನೌಕರರಲ್ಲಿ ಭೀತಿಯನ್ನು ಹೆಚ್ಚಿಸಿದೆ. ತಾವು ರಾಜಕೀಯ ಆಟದ ಬಲಿಪಶುಗಳಾಗಿದ್ದೇವೆ ಎಂದು ಹೆಚ್ಚಿನ ನೌಕರರು ಆರೋಪಿಸಿರುವುದಾಗಿ ಟಾಟಾ ಮೋಟಾರ್ಸ್ ಹೇಳಿದೆ.
|