ಸಿಂಗೂರಿನಲ್ಲಿ ನ್ಯಾನೋ ವಿರೋಧಿಸಿ ತೃಣಮೂಲ ಕಾಂಗ್ರೆಸ್ ಪಕ್ಷವು ನಡೆಸುತ್ತಿರುವ ಪ್ರತಿಭಟನೆಯು ಒಂಭತ್ತನೇ ದಿನಕ್ಕೆ ಕಾಲಿಟ್ಟಿದ್ದು, ನ್ಯಾನೋ ಸ್ಥಾವರದಲ್ಲಿ ಕಾರ್ಯ ಪ್ರಾರಂಭಕ್ಕೆ ಪರಿಸ್ಥಿತಿಯು ಅನುಕೂಲಕರವಾಗಿರದ ಹಿನ್ನೆಲೆಯಲ್ಲಿ, ಸೋಮವಾರವೂ ಸಿಂಗೂರಿನ ನ್ಯಾನೋ ಸ್ಥಾವರದಲ್ಲಿ ಕಾರ್ಯವು ಸ್ಥಗಿತಗೊಂಡಿದೆ.
ನ್ಯಾನೋ ಸ್ಥಾವರದಲ್ಲಿ ಕೆಲಸ ಪ್ರಾರಂಭಿಸಲು ಪರಿಸ್ಥಿತಿಯು ಇನ್ನೂ ಅನುಕೂಲಕರವಾಗಿಲ್ಲ ಎಂದು ಟಾಟಾ ಮೋಟಾರ್ಸ್ ವಕ್ತಾರರು ತಿಳಿಸಿದ್ದಾರೆ.
ನ್ಯಾನೋ ಕಾರ್ಖಾನೆಯ ಮುಖ್ಯದ್ವಾರ ಪ್ರವೇಶದ ನಿರ್ಬಂಧವನ್ನು ಪ್ರತಿಭಟನಾಕಾರರು ಮುಂದುವರಿಸಿದ್ದು, ದುರ್ಗಾಪುರ ಎಕ್ಸ್ಪ್ರೆಸ್ವೇ ತಡೆಯು ತೆರವುಗೊಳ್ಳದ ಕಾರಣ, ಸಾವಿರಾರು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಈ ನಡುವೆ, ಸಿಂಗೂರ್ ವಿವಾದದ ಕುರಿತಾಗಿ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ಪಶ್ಚಿಮಬಂಗಾಲ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರ ಆಹ್ವಾನಕ್ಕೆ ಬ್ಯಾನರ್ಜಿ ಒಪ್ಪಿಗೆ ಸೂಚಿಸಿದ್ದರೂ, ಧರಣಿಯನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ನಾನೂರು ಎಕರೆ ಜಮೀನನ್ನು ರೈತರಿಗೆ ಹಿಂತಿರುಗಿಸಬೇಕೆನ್ನುವ ಪಕ್ಷದ ಬೇಡಿಕೆಯನ್ನು ಸರಕಾರವು ಪೂರೈಸುವವರೆಗೆ ಧರಣಿಯನ್ನು ಮುಂದುವರಿಸುವುದಾಗಿ ಹೇಳಿರುವ ಬ್ಯಾನರ್ಜಿ, ಮಾತುಕತೆ ಮತ್ತು ಧರಣಿ ಒಂದೇ ಸಮಯದಲ್ಲಿ ನಡೆಯಲು ಸಾಧ್ಯವಿದೆ ಎಂದು ಸೂಚಿಸಿದ್ದಾರೆ.
ಏತನ್ಮಧ್ಯೆ, ಟಾಟಾ ಮೋಟಾರ್ಸ್ ರಖಂ ಕ್ಷೇತ್ರ ಪ್ರವೇಶಿಸುವುದನ್ನು ವಿರೋಧಿಸಿ, ತೃಣಮೂಲ ಕಾಂಗ್ರೆಸ್ ಪಕ್ಷವು ಇಂದು ರ್ಯಾಲಿ ನಡೆಸುವ ಸಾಧ್ಯತೆಗಳಿವೆ.
|