ಮುಂಬೈ : ಐಸಿಐಸಿಐ ಬ್ಯಾಂಕ್ ದಿವಾಳಿಯಾಗಿದೆ, ಶೇರುದರಗಳಲ್ಲಿ ಕುಸಿತ ಕಾಣುತ್ತಿವೆ ಎಂಬ ಊಹಾಪೋಹಗಳ ವರದಿಗಳನ್ನು ಹರಡಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಐಸಿಐಸಿಐ ಬ್ಯಾಂಕ್ ಪೊಲೀಸರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಇಲಾಖೆ ವಿಶೇಷ ತಂಡವನ್ನು ರಚಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಐಸಿಐಸಿಐ ಬ್ಯಾಂಕ್ 22 ಪುಟಗಳ ದೂರನ್ನು ಸಲ್ಲಿಸಿದ್ದು, ಆರ್ಥಿಕ ಅಪರಾಧ ವಿಭಾಗ ಹಾಗು ಸೈಬರ್ ಕ್ರೈಮ್ ತನಿಖಾ ತಂಡ ಐಸಿಐಸಿಐ ದೂರಿನ ಕುರಿತಂತೆ ವಿಚಾರಣೆ ನಡೆಸುತ್ತಿದೆ ಎಂದು ಮುಂಬೈನ ಜಂಟಿ ಪೊಲೀಸ್ ಆಯುಕ್ತ(ಅಪರಾಧ)ರಾಕೇಶ್ ಮಾರಿಯಾ ತಿಳಿಸಿದ್ದಾರೆ.
ಮುಂಬೈ ಶೇರುಪೇಟೆಯಲ್ಲಿ ಶೇರುಗಳ ಖರೀದಿಯಲ್ಲಿ ತೊಡಗಿರುವ ಉನ್ನತ ಮಟ್ಟದ ಬ್ರೋಕರ್ಗಳು ಬ್ಯಾಂಕ್ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವ ಊಹಾಪೋಹ ವರದಿಗಳನ್ನು ಹರಡಿಸುವಲ್ಲಿ ನಿರತರಾಗಿದ್ದಾರೆ ಎಂದು ಐಸಿಐಸಿಐ ಬ್ಯಾಂಕ್ ತನ್ನ ದೂರಿನಲ್ಲಿ ವಿವರಣೆ ನೀಡಿದೆ.
ಐಸಿಐಸಿಐ ಬ್ಯಾಂಕ್ ತನ್ನ ದೂರಿನಲ್ಲಿ ಯಾವುದೇ ವ್ಯಕ್ತಿಯನ್ನಾಗಲಿ ಅಥವಾ ಸಂಸ್ಥೆಯನ್ನಾಗಲಿ ವಿಶೇಷವಾಗಿ ನಮೂದಿಸಿಲ್ಲ ಎಂದು ಸಹಾಯಕ ಪೊಲೀಸ್ ಆಯುಕ್ತ ಸಂಜಯ್ ಸಕ್ಸೆನಾ ತಿಳಿಸಿದ್ದಾರೆ.
|