ದೇಶದ ಪ್ರಮುಖ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ಏರ್ವೇಸ್ ನೌಕರರನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ಮುಂಬೈನಿಂದ ಯಾವುದೇ ಜೆಟ್ ವಿಮಾನವನ್ನು ಹಾರಾಟ ನಡೆಸಲು ಬಿಡುವುದಿಲ್ಲ ಎಂದು ಬುಧವಾರ ಧಮಕಿ ಹಾಕಿದ್ದಾರೆ.ನಾಳೆ ಜೆಟ್ ಸಂಸ್ಥೆಯ ಅಧಿಕಾರಿಗಳನ್ನು ಭೇಟಿ ಮಾಡಿ ವಜಾಗೊಳಿಸಿದ ನೌಕರರನ್ನು ಮರುಸೇರ್ಪಡೆಗೊಳಿಸುವಂತೆ ಮನವಿ ಮಾಡಲಾಗುವುದು. ನೌಕರರ ಮರುಸೇರ್ಪಡೆಗೆ ವಿರೋಧಿಸಿ ಮನಬಂದಂತೆ ವರ್ತಿಸಿದಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಠಾಕ್ರೆ ಜೆಟ್ ಸಂಸ್ಥೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕಿಂಗ್ಫಿಶರ್ ಮೈತ್ರಿಯ ಬಲದಿಂದ ಸಾಗುತ್ತಿರುವ ಖಾಸಗಿ ವಿಮಾನಯಾನ ಜೆಟ್ ಏರ್ವೇಸ್ ಸಂಸ್ಥೆ ಒಂದು ಸಾವಿರ ನೌಕರರನ್ನು ಹುದ್ದೆಗಳಿಂದ ವಜಾಗೊಳಿಸಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಜೆಟ್ಏರ್ವೇಸ್ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು 30 ದಿನಗಳ ಪ್ಯಾಕೆಜ್ ನೀಡಿ ಹುದ್ದೆಗಳಿಂದ ವಜಾಗೊಳಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೆಟ್ಏರ್ವೇಸ್ ಮತ್ತು ಕಿಂಗ್ಫಿಶರ್ ಏರ್ಲೈನ್ಸ್ ಸಂಸ್ಥೆಗಳು ದೇಶದ ವಿಮಾನಯಾನ ಕ್ಷೇತ್ರದಲ್ಲಿ ಶೇ.60ರಷ್ಟು ಪಾಲುದಾರಿಕೆಯನ್ನು ಹೊಂದಿದ್ದು, ಜಂಟಿಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವುದಾಗಿ ಘೋಷಿಸಿವೆ. ಜೆಟ್ಏರ್ವೇಸ್ನ ಕಾರ್ಯನಿರ್ವಾಹಕ ಅಧಿಕಾರಿ ನರೇಶ್ ಗೋಯಲ್ ಮತ್ತು ಕಿಂಗ್ಫಿಶರ್ ಮುಖ್ಯಸ್ಥ ವಿಜಯ್ ಮಲ್ಯ ನಗರದಲ್ಲಿ ಆರಂಭವಾದ ಏರ್ಶೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. |
|