ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಮೆರಿಕ ಹಾಗೂ ಯುರೋಪ್ ಖಂಡದ ದೇಶಗಳು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಭಾರತ ನೆಹರು ಆಡಳಿತ ತಂತ್ರ ನೀತಿಯನ್ನು ಮುಂದುವರಿಸಿಕೊಂಡು ಹೋಗಲಿದೆ, ಅಲ್ಲದೇ ಆರ್ಥಿಕ ಹೊಡೆತದಿಂದ ಎಲ್ಲಾ ದೇಶಗಳು ಪಾಠ ಕಲಿಯಬೇಕು ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.
ಕಾಲಕ್ಕೆ ತಕ್ಕಂತೆ ಆಡಳಿತ ಕ್ರಮ ಬದಲಾಗಿರಬಹುದು, ಆದರೆ ವಿಚಾರಗಳು ಬದಲಾಗಿಲ್ಲ ಎಂದರು. ಪಂಡಿತ್ ನೆಹರು ಅವರು ಸ್ವಾತಂತ್ರ್ಯ ಚಳವಳಿಯ ನಾಯಕರಾಗಿ ಬಿಂಬಿಸಿಕೊಂಡಿದ್ದ ಕಾಲದಲ್ಲಿ ಬೆಳೆದು ಬಂದ ಬಾಲಕರ ಗುಂಪಿನಲ್ಲಿ ನಾನೂ ಒಬ್ಬ ಎಂದರು.
ಅಮೆರಿಕದ ಹಣಕಾಸು ವ್ಯವಸ್ಥೆ ದಕ್ಷತೆಯಿಂದ ಕೂಡಿದ್ದು, ಹಲವು ಆಯಾಮಗಳನ್ನು ಪರಿಚಯಿಸಿದೆ. ಆದರೆ ಈಗ ಅದು ಸಂಪೂರ್ಣ ಉಲ್ಟಾ ಆಗಿದೆ ಎಂದು ಅಭಿಪ್ರಾಯಪಟ್ಟರು.
ಹಣಕಾಸು ವ್ಯವಸ್ಥೆಯಲ್ಲಿ ಹೊಸ ಆಯಾಮದಲ್ಲಿನ ಅಪಾಯಗಳನ್ನು ಅರಿತುಕೊಳ್ಳದಿದ್ದರೆ, ಅದರಿಂದ ಉಂಟಾಗುವ ನಷ್ಟವನ್ನು ಭರಿಸಲು ಅದರ ಆಚರಣೆಗಿಂತಲೂ ಹೆಚ್ಚಿನದನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಜಾಗತಿಕ ಆರ್ಥಿಕ ಹೊಡೆತದಿಂದ ಭಾರತವೂ ಸೇರಿದಂತೆ ಎಲ್ಲಾ ದೇಶಗಳು ಪಾಠ ಕಲಿಯಬೇಕು ಎಂದು ತಿಳಿಸಿದ ಅವರು, ಲಾಭವನ್ನೇ ನಿರೀಕ್ಷಿಸುವ ಬದಲಾಗಿ, ದುರಂತಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ ಬಲಿಷ್ಠಗೊಳಿಸಬೇಕಾಗಿದೆ ಎಂದು ಹೇಳಿದರು.
|