ದೊಡ್ಡ ಪ್ರಮಾಣದ ಹಣದುಬ್ಬರ ಹಾಗೂ ಜಾಗತಿಕ ಹಣಕಾಸು ಬಿಕ್ಕಟ್ಟು ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಏಶ್ಯಾ-ಯೂರೋಪ್ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿ ಭಾರತಕ್ಕೆ ಮರಳುತ್ತಿದ್ದ ವೇಳೆ ವಿಶೇಷ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. "ಪ್ರಸ್ತುತ ಪರಿಸ್ಥಿತಿಯ ಕುರಿತು ತಾನು ಚಿಂತಿತನಾಗಿಲ್ಲ ಎಂದು ಹೇಳುವುದು ಸರಿಯಲ್ಲ. ಒಂದು ರಾಷ್ಟ್ರದ ಪ್ರಧಾನಿಯಾಗಿರುವಾಗ, ಯೋಜನೆಯಂತೆ ಸಂಗತಿಗಳು ನಡೆಯುತ್ತಿಲ್ಲ ಎಂದಾದಾಗ ಚಿಂತಿಸುವುದು ನನ್ನ ಕರ್ತವ್ಯವಾಗಿದೆ" ಎಂದು ಅವರು ಹೇಳಿದರು.
"ನಾವು ಉತ್ತಮ ಪರಿಸ್ಥಿತಿಯಲ್ಲೇ ಇದ್ದೆವು. ಆದರೆ ಕಳೆದ ಕೆಲವು ತಿಂಗಳಿಂದ ಹಣದುಬ್ಬರದ ಸಮಸ್ಯೆ ಕಾಡುತ್ತಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ನಮ್ಮ ಆರ್ಥಿಕತೆಯ ಮೇಲೆ ಸ್ವಲ್ಪಮಟ್ಟಿನ ಪರಿಣಾಮ ಬೀರಿದೆ. ಹಾಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಾವು ಬಾಧ್ಯರಾಗಿದ್ದೇವೆ" ಎಂದು ಪ್ರಧಾನಿ ನುಡಿದರು.
"ಜಾಗತಿಕ ಮಾರುಕಟ್ಟೆಯಲ್ಲಿ ವಿಶ್ವಾಸ ಮರುಸ್ಥಾಪನೆಯಾಗುವ ತನಕ ಸಮಸ್ಯೆ ಮುಂದುವರಿಯಲಿದೆ. ನಾವು ಸಂಪೂರ್ಣ ನಿಯಂತ್ರಣದಲ್ಲಿಲ್ಲ. ಪ್ರಮುಖ ಪಾತ್ರಧಾರಿಗಳು ಬೇರೆಯವರಾಗಿದ್ದರೆ, ನಾವದರ ಬಲಿಪಶುಗಳು ಮಾತ್ರ" ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು. |