ಜಾಗತಿಕ ಆರ್ಥಿಕ ಬಿಕ್ಕಟ್ಟು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಎಚ್ಚರಿಕೆ ನೀಡಿದ್ದು, ಏನೇ ಆದರೂ, ಬ್ಯಾಂಕಿಂಗ್ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸರಕಾರವು ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕ್ ಠೇವಣಿ ಸುರಕ್ಷತೆಯ ಬಗ್ಗೆ ಯಾರೂ ಭೀತಿ ಪಡಬೇಕಾಗಿಲ್ಲ. ಸುರಕ್ಷತೆಯ ಹೆಚ್ಚಳಕ್ಕಾಗಿ ಸರಕಾರವು ಇನ್ನಷ್ಟು ಕ್ರಮ ಕೈಗೊಳ್ಳಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ.ಜಾಗತಿಕ ಹಣಕಾಸು ಬಿಕ್ಕಟ್ಟು ಸಂಬಂಧ ದೇಶದ ಆರ್ಥಿಕತೆಯ ಕುರಿತಾಗಿ ಚರ್ಚೆ ನಡೆಸಲು, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಉದ್ಯಮ ನಾಯಕರೊಂದಿಗೆ ನಡೆಸಿದ ಸಭೆಯಲ್ಲಿ ಈ ಮಾತನ್ನು ಹೇಳಿದ್ದಾರೆ.ಖಾಸಗಿ ಮತ್ತು ಸರಕಾರಿ ಕ್ಷೇತ್ರವು ಸುರಕ್ಷಿತವಾಗಿದ್ದು, ಬ್ಯಾಂಕ್ ಠೇವಣಿ ಸುರಕ್ಷತೆಯ ಬಗ್ಗೆ ಜನರು ಭಯಪಡಬೇಕಾಗಿಲ್ಲ ಎಂದು ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಈಗಾಗಲೇ ಜನರಿಗೆ ಸ್ಪಷ್ಟನೆಯನ್ನು ನೀಡಲಾಗಿದೆ ಎಂದು ಮನಮೋಹನ್ ಸಿಂಗ್ ಉದ್ಯಮ ನಾಯಕರಿಗೆ ಹೇಳಿದ್ದಾರೆ.ಪ್ರಸಕ್ತ ಜಾಗತಿಕ ಪ್ರಕ್ಷುಬ್ಧತೆಯು ಭಾರತೀಯ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಅಂತಹ ಪರಿಸ್ಥಿತಿ ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಭಾರತವು ಸಿದ್ಧವಾಗಿದೆ ಎಂದು ಪ್ರಧಾನಮಂತ್ರಿ ಭರವಸೆ ನೀಡಿದ್ದಾರೆ.ಸರಕಾರವು ಅಗತ್ಯವಾದ ಹಣಕಾಸು ಮತ್ತು ಆರ್ಥಿಕ ನೀತಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ ಅವರು, ಸುಧಾರಿತ ನಿಯಂತ್ರಣ ಮತ್ತು ಅವಲೋಕನಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಸುಧಾರಣೆಯನ್ನು ಭಾರತವು ನಿರೀಕ್ಷಿಸುತ್ತದೆ ಎಂದು ಹೇಳಿದ್ದಾರೆ.ಜಾಗತಿಕ ಆರ್ಥಿಕತೆಯ ಕುರಿತಾದ ಸವಾಲನ್ನು ಎದುರಿಸಲು ಸರಕಾರದೊಂದಿಗೆ ನೈಜ ಪಾಲುದಾರಿಕೆಯೊಂದಿಗೆ ಕಾರ್ಯನಿರ್ವಹಿಸುವಂತೆ ಸಿಂಗ್ ಉದ್ಯಮ ನಾಯಕರಿಗೆ ಕರೆ ನೀಡಿದ್ದಾರೆ.ಮುಖೇಶ್ ಅಂಬಾನಿ, ಆನಂದ್ ಮಹಿಂದ್ರಾ, ಕೆ.ವಿ.ಕಾಮತ್, ಸುನಿಲ್ ಭಾರ್ತಿ ಮಿತ್ತಲ್, ದೀಪಕ್ ಪಾರಿಕ್, ಶಶಿ ರಿಯಾ, ಕೆ.ಪಿ.ಸಿಂಗ್, ರಾಜ್ಕುಮಾರ್ ಧೂತ್ ಮುಂತಾದ ಉದ್ಯಮಿಗಳು ಸಭೆಯಲ್ಲಿ ಭಾಗವಹಿಸಿದ್ದರು. |
|