ಪ್ರಸ್ತುತ ಎದುರಾಗಿರುವ ಜಾಗತಿಕ ಆರ್ಥಿಕ ಬಿಕ್ಕಟ್ಟು , ಅಭಿವೃದ್ಧಿ, ರಫ್ತು, ರೂಪಾಯಿ ಮೌಲ್ಯಗಳ ಒಳಹರಿವಿನ ಮೇಲೆ ಅಲ್ಪಪರಿಣಾಮ ಬೀರುತ್ತಿದ್ದರೂ ಮುಂಬರುವ ದಿನಗಳಲ್ಲಿ ದೇಶ ಉತ್ತಮ ಅಭಿವೃದ್ಧಿಗೆ ಮರಳುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದ ಮೇಲೆ ಜಾಗತಿಕ ಪರೋಕ್ಷ ಬಿಕ್ಕಟ್ಟು ಎದುರಿಗಿರುವುದರಿಂದ ಅದನ್ನು ಅಳೆಯಲು ಸಾಧ್ಯವಿಲ್ಲ. ಆದರೆ ದೇಶದ ಅಭಿವೃದ್ಧಿಗೆ , ರಫ್ತುವಹಿವಾಟಿಗೆ ಮತ್ತು ಕರೆನ್ಸಿಯ ಒಳಹರಿವಿಗೆ ಅಲ್ಪಮಟ್ಟಿಗೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ದೇಶದ ಅಭಿವೃದ್ಧಿ ದರ ಮುಂದಿನ ವರ್ಷದಲ್ಲಿ ಶೇ.7.8ಕ್ಕೆ ತಲುಪಲಿದೆ ಎಂದು ಸಮೀಕ್ಷೆ ನಡೆಸಿ ವರದಿಯನ್ನು ನೀಡಿದೆ. ದೇಶದ ಆರ್ಥಿಕ ಸ್ಥಿತಿ ಸದೃಢವಾಗಿರುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿ ಮುಂಬರುವ 2008-09ರಲ್ಲಿ ಉತ್ತಮ ಅಭಿವೃದ್ಧಿಯತ್ತ ಮರಳುವ ಭರವಸೆಯಿದೆ ಎಂದು ಸಚಿವ ಚಿದಂಬರಂ ಹೇಳಿದ್ದಾರೆ.
ದೇಶದ ಮೇಲೆ ಪರೋಕ್ಷವಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಆದರೆ ದೇಶದ ಆರ್ಥಿಕತೆ ಬಲವಾಗಿರುವುದರಿಂದ ಮತ್ತೆ ಉತ್ತಮ ಸ್ಥಿತಿಯತ್ತ ಮರಳುವ ವಿಶ್ವಾಸವಿದೆ ಎಂದು ಸಚಿವ ಚಿದಂಬರಂ ಪ್ರಧಾನಮಂತ್ರಿಯೊಂದಿಗೆ ಅಮೆರಿಕದ ವಾಷಿಂಗ್ಟನ್ನಲ್ಲಿ ನಾಳೆ ನಡೆಯಲಿರುವ ಜಿ-20 ರಾಷ್ಟ್ರಗಳ ಸಭೆಯಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದಲ್ಲಿ ತೆರಳುತ್ತಿದ್ದಾಗ ಸುದ್ದಿಗಾರರೊಂದಿಗೆ ತಿಳಿಸಿದರು. |