ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ದೇಶಧ ಆರ್ಥಿಕ ಸ್ಥಿತಿಯಲ್ಲಿ ಆತಂಕದ ವಾತಾವರಣವಿದ್ದು, ಮುಂಬರುವ ವರ್ಷದಲ್ಲಿ ಮರಳಿ ಸುಸ್ಥಿತಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ .
ನವದೆಹಲಿಯಲ್ಲಿ ನಡೆದ ಆರ್ಥಿಕ ಶೃಂಗಸಭೆಯಲ್ಲಿ ಮಾತನಾಡಿದ ಚಿದಂಬರಂ, ಆರ್ಥಿಕ ಕುಸಿತವಾಗಿರುವುದು ಮೊದಲ ಬಾರಿಯಲ್ಲ. ಆದರೆ ಪ್ರಸಕ್ತ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ಹೆಚ್ಚಿನ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ನಾವು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯನ್ನು ಸೃಷ್ಟಿಸಿಲ್ಲ .ಆದರೆ ಆರ್ಥಿಕ ಸಮಸ್ಯೆಯ ಪಾಲುದಾರರಾಗಿದ್ದೇವೆ.ಆರ್ಥಿಕ ಬಿಕ್ಕಟ್ಟು ಒಂದಿಲ್ಲೊಂದು ದಿನ ಅಂತ್ಯಗೊಳ್ಳಬೇಕಾಗಿದೆ ಎಂದು ಸಚಿವ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಾಸ, ಧೈರ್ಯ ಮತ್ತು ಧೃಢ ನಿರ್ಧಾರ ತೆಗೆದುಕೊಳ್ಳುವುದರಿಂದ ಪ್ರಸಕ್ತ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಮಂಗಳ ಹಾಡಬಹುದಾಗಿದೆ.ಕೃಷಿ ಕ್ಷೇತ್ರ ನಿರಂತರವಾಗಿ ಅಭಿವೃದ್ಧಿಯತ್ತ ಸಾಗುತ್ತಿದ್ದು, ಸರಕಾರ ಪ್ರಸಕ್ತ ವರ್ಷದಲ್ಲಿ ಬಂಪರ್ ಬೆಳೆಯನ್ನು ನಿರೀಕ್ಷಿಸಿದೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ. |