ಆರ್ಥಿಕ ಮುಗ್ಗಟ್ಟಿನಿಂದಾಗಿ ಜಾಗತಿಕ ಮಟ್ಟದ ಕಂಪೆನಿಗಳು ಹುದ್ದೆಗಳನ್ನು ಕಡಿತಗೊಳಿಸುತ್ತಿರುವುದಕ್ಕೆ ಆತಂಕ ಬೇಡ, ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7.0ಕ್ಕೆ ಕುಸಿತಗೊಂಡರೂ ಹುದ್ದೆಗಳ ಸಂಖ್ಯೆಯಲ್ಲಿ ಇಳಿಮುಖವಾಗುವುದಿಲ್ಲ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.
ಕೃಷಿ ಕ್ಷೇತ್ರ ಸೇರಿದಂತೆ ದೇಶದ ಒಟ್ಟಾರೆ ಆರ್ಥಿಕತೆ ಶೇ.7 ಅಥವಾ ಅದಕ್ಕಿಂತ ಕುಸಿತ ಕಂಡರೂ ಹುದ್ದೆಗಳ ಸಂಖ್ಯೆಯಲ್ಲಿ ಕಡಿತವಾಗುತ್ತದೆ ಎಂದು ನಾನು ಭಾವಿಸಿಲ್ಲ ಎಂದು ಆಹ್ಲುವಾಲಿಯಾ ಭಾರತದ ಆರ್ಥಿಕ ಶೃಂಗಸಭೆಯಲ್ಲಿ ತಿಳಿಸಿದ್ದಾರೆ.
ಆದರೆ ಕೈಗಾರಿಕೋದ್ಯಮದ ಕೆಲ ಕ್ಷೇತ್ರಗಳ ಮೇಲೆ ಆರ್ಥಿಕ ಕುಸಿತದ ಭಾರಿ ಪರಿಣಾಮ ಬೀರಲಿರುವುದರಿಂದ ಅಂತಹ ಕ್ಷೇತ್ರಗಳ ಹುದ್ದೆಗಳಲ್ಲಿ ಕಡಿತವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಹಣದುಬ್ಬರ ಮೊದಲ ಬಾರಿಗೆ ಒಂದಂಕಿಗೆ ಕುಸಿತಗೊಂಡ ಕುರಿತಂತೆ ಮಾತನಾಡಿದ ಯೋಜನಾ ಆಯೋಗದ ಉಪಾಧ್ಯಕ್ಷರು ಮುಂಬರುವ ದಿನಗಳಲ್ಲಿ ಹಣದುಬ್ಬರ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು. |