ಭಾರತೀಯ ಜನತಾ ಪಕ್ಷದ ವಿರೋಧ ಪಕ್ಷದ ನಾಯಕ, ಬಿಜೆಪಿಯ ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಲ್.ಕೆ.ಅಡ್ವಾಣಿ ಕರೆದಿದ್ದ ಕೈಗಾರಿಕೊದ್ಯಮಿಗಳ ಸಭೆಯಲ್ಲಿ, ಅಂಬಾನಿ ಸಹೋದರರು ಪರಸ್ಪರ ಕೈಕುಲುಕಿ ಅಚ್ಚರಿ ಮೂಡಿಸಿದರು.
ಆರ್ಥಿಕ ಬಿಕ್ಕಟ್ಟು ಕುರಿತಂತೆ ಚರ್ಚಿಸಲು ಅಡ್ವಾಣಿ ಅವರ ಕರೆಯ ಮೇರೆಗೆ ಅಂಬಾನಿ ಸಹೋದರರು ಸೇರಿದಂತೆ ದೇಶದ ಖ್ಯಾತ ಉದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಮಂಡಿಸಿದರು.ಕೈಗಾರಿಕೋದ್ಯಮಿಗಳು ಅಡ್ವಾಣಿ ಅವರ ಕರೆಯ ಮೇರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲಿದೆ ಎನ್ನುವ ಸಂಕೇತವವನ್ನು ನೀಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಿಜೆಪಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಅಡ್ವಾಣಿ ಅವರು ಕರೆದ ಸಭೆಗೆ ಅನಿಲ್ ಅಂಬಾನಿ ಐದು ನಿಮಿಷ ಮುಂಚಿತವಾಗಿ ಆಗಮಿಸಿ ಉಪಸ್ಥಿತರಿದ್ದ ಉದ್ಯಮಿಗಳ ಜೊತೆಯಲ್ಲಿ ಉಭಯಕುಶಲೋಪರಿ ಮಾತುಕತೆಗಳನ್ನು ನಡೆಸಿದ್ದರು.ನಂತರ ಮುಕೇಶ್ ಅಂಬಾನಿ ಆಗಮಿಸಿದಾಗ ಅನಿಲ್ ಅಂಬಾನಿ ಹಸ್ತಲಾಘವ ಮಾಡಿ ನೆರೆದವರು ಆಶ್ಚರ್ಯಚಕಿತರಾಗುವಂತೆ ಮಾಡಿದರು . ಎಕಾನಾಮಿಕ್ ಟೈಮ್ಸ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾಣಿಸಿಕೊಂಡ ಅಂಬಾನಿ ಸಹೋದರರು ಬಹು ದಿನಗಳ ನಂತರ ಮತ್ತೆ ಜೊತೆಯಾದರು.
ಸುನೀಲ್ ಮಿತ್ತಲ್ , ರಾಹುಲ್ ಬಜಾಜ್,ವೇಣು ಶ್ರೀನಿವಾಸನ್ ,ಶಶಿ ರುಜಾ,ಸುಭಾಷ್ ಚಂದ್ರಾ, ಜಿಎಂ.ರಾವ್, ಬಾಬಾ ಕಲ್ಯಾಣಿ, ಜೆ.ಪಿ.ಗೌರ್, ಸಜ್ಜನ್ ಜಿಂದಾಲ್ ರಾಜೀವ್ ಚಂದ್ರಶೇಖರ್ ಅವರುಗಳನ್ನು ಅಡ್ವಾಣಿ ಅಹ್ವಾನಿಸಿದ್ದರು
ಒಂದು ವೇಳೆ ತಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಭಾರತ ಅಭಿವೃದ್ಧಿ ಪಥದತ್ತ ಸಾಗಿಸುವುದಾಗಿ ಎಲ್.ಕೆ ಅಡ್ವಾಣಿ ಭರವಸೆ ನೀಡಿದರು. |