ಇಂದು ಶೇರು ಮಾರುಕಟ್ಟೆಯನ್ನು ಮುಚ್ಚಬಾರದಿತ್ತು ಮತ್ತು ಭಯೋತ್ಪಾದಕರ ದಾಳಿಯಿಂದ ವ್ಯವಹಾರ ದಿಕ್ಕೆಡುತ್ತಿರಲಿಲ್ಲ ಎಂದು ಹೂಡಿಕೆದಾರ ಮತ್ತು ಉದ್ಯಮಿ ರಾಕೇಶ್ ಜುಂಜುನ್ವಾಲಾ ಅಭಿಪ್ರಾಯಪಟ್ಟಿದ್ದಾರೆ.
"ಈಗಿನ ಈ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಎಂದಿನಂತೆ ವ್ಯವಹಾರ ಮಾಡುವುದು ಕಷ್ಟ. ಅದರೆ ಮುಚ್ಚುವ ಬದಲು ತೆರೆದಿಡುವುದು ಉತ್ತಮ ಬೆಳವಣಿಗೆ. ಯಾಕೆಂದರೆ ಉಗ್ರರಿಂದ ನಮ್ಮ ದೈನಂದಿನ ಕೆಲಸಗಳು ಅಸ್ತವ್ಯಸ್ತವಾಗಿದೆ ಎಂದು ತೋರಿಸುವುದು ಸರಿಯಲ್ಲ. ಜನಜೀವನಕ್ಕೇನೂ ತೊಂದರೆಯಾಗಿಲ್ಲ ಎಂಬುದನ್ನು ಬಿಂಬಿಸುವ ಅಗತ್ಯವಿದೆ. ಆ ದಾಳಿ ನಮ್ಮನ್ನು ಬಾಧಿಸಿಲ್ಲ ಎಂಬಂತೆ ನಾವಿರಬೇಕಾಗಿತ್ತು. ಆದರೆ ಈಗ ಮಾರುಕಟ್ಟೆಯನ್ನು ಮುಚ್ಚಲಾಗಿರುವುದರಿಂದ ಈ ಬಗೆಗಿನ ಚರ್ಚೆ ಅನುಪಯುಕ್ತ" ಎಂದು ರಾಕೇಶ್ ಅಭಿಪ್ರಾಯಪಟ್ಟಿದ್ದಾರೆ.
ದಲ್ಲಾಳಿಗಳು, ಹೂಡಿಕೆದಾರರು ಮತ್ತು ವ್ಯಾಪಾರಿಗಳು ಕಂಗಾಲಾಗಿದ್ದಾರೆಯೇ ಎಂಬ ಪ್ರಶ್ನಿಸಿದ್ದಕ್ಕೆ, "ನಾನಂತೂ ಯಾವುದೇ ರೀತಿಯ ಭಯಭೀತಿಗೊಳಗಾಗಿಲ್ಲ. ಈ ಹಿಂದಿನ 1993ರ ಸ್ಫೋಟ ಸಂದರ್ಭದಲ್ಲಿಯೂ ಇದನ್ನು ನೋಡಿದ್ದೇನೆ. ಆಗಲೂ ನಾನು ಮುಂಬೈ ಶೇರು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿದ್ದೆ. ನನ್ನ ಪ್ರಕಾರ ದೇಶದ ಒಂದು ಕಡೆ 100 ಜನ ಸಾವನ್ನಪ್ಪಿದರೆ ಇಡೀ ದೇಶಕ್ಕೆ ಅಂತಹ ಗಂಭೀರ ಪರಿಣಾಮ ಬೀರದು. ಅದಕ್ಕಿಂತಲೂ ಮುಖ್ಯವಾಗಿ ಹೇಳಬೇಕಾಗಿರುವುದೇನೆಂದರೆ ನಮಗೆ ಗರಿಷ್ಠ ಭದ್ರತಾ ವ್ಯವಸ್ಥೆ ಬೇಕಾಗಿದೆ ಮತ್ತು ಕನಿಷ್ಠ ಸಂಸತ್ತಿಗೆ ದಾಳಿ ಮಾಡಿದವರಿಗಾದರೂ ಗಲ್ಲು ಶಿಕ್ಷೆ ವಿಧಿಸಬೇಕು" ಎಂದು ಅವರು ಪರಿಸ್ಥಿತಿಯನ್ನು ವಿಶ್ಲೇಷಿಸಿದರು.
ಸಂಸತ್ತಿಗೇ ದಾಳಿಯಾಗಿರುವುದಕ್ಕೆ ಅವಮಾನದಿಂದ ಒಬ್ಬ ಭಾರತೀಯನಾಗಿ ನಾನೂ ತಲೆ ತಗ್ಗಿಸಬೇಕಾಗಿದೆ. ಆದರೆ ನಮ್ಮ ದೇಶದಲ್ಲಿ ಆ ವ್ಯಕ್ತಿಯನ್ನು ಗಲ್ಲಿಗೇರಿಸಲಾಗುತ್ತಿಲ್ಲ. ನಾವು ಭಯೋತ್ಪಾದನೆ ಬಗ್ಗೆ ಸಹಾನುಭೂತಿ ಹೊಂದುತ್ತಿದ್ದೇವೆ ಅನ್ನಿಸುತ್ತಿದೆ ಎಂದೂ ರಾಕೇಶ್ ಹೇಳಿದರು.
|