ಜನರಲ್ ಮೋಟಾರ್ಸ್ ಆರ್ಥಿಕ ಸಂಕಷ್ಟದ ಕಾರಣದಿಂದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ರ ಜತೆಗಿದ್ದ ಪ್ರಾಯೋಜಕತ್ವವನ್ನು ಮುರಿದುಕೊಂಡ ಬೆನ್ನಲ್ಲೇ ಕಂಪನಿಯ ಭಾರತದ ರಾಯಭಾರಿ ಸೈಫ್ ಆಲಿ ಖಾನ್ಗೆ ಕೂಡ ಖೊಕ್ ಕೊಡುವ ಸಾಧ್ಯತೆಗಳಿವೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ.
ಟೈಗರ್ ವುಡ್ಸ್ ಜತೆಗಿನ ಪಟ್ಟಿಯಲ್ಲಿ ಒಂದಾಗಲಿರುವ ಸೈಫ್ ಆಲಿ ಖಾನ್ 2006ರಲ್ಲಿ ಕಂಪನಿಯ ಪ್ರಾಯೋಜಕತ್ವಕ್ಕೆ ಸಹಿ ಮಾಡಿದ್ದರು. ಆ ಪ್ರಕಾರ ಸೈಫ್ಗೆ ಕಂಪನಿ ವರ್ಷಕ್ಕೆ ಎರಡು ಕೋಟಿ ರೂಪಾಯಿಗಳನ್ನು ಸಂದಾಯ ಮಾಡಬೇಕಿತ್ತು. ಮೂಲಗಳ ಪ್ರಕಾರ ಸೈಫ್ ಪ್ರಾಯೋಜಕತ್ವವನ್ನು ನವೀಕರಣ ಮಾಡುವ ಸಾಧ್ಯತೆ ಕಡಿಮೆ. ಮುಂದಿನ ವರ್ಷದ ಎಪ್ರಿಲ್ಗೆ ಒಪ್ಪಂದ ಮುಗಿಯಲಿದ್ದು, ಅದಕ್ಕಿಂತ ಮೊದಲೇ ಕಳಚುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಜನರಲ್ ಮೋಟಾರ್ಸ್ ಕಾರು ತಯಾರಿಕಾ ಸಂಸ್ಥೆ ಕಳೆದ ವರ್ಷದ ಅಂತ್ಯದಲ್ಲಿ ರಾಣಿ ಮುಖರ್ಜಿಯನ್ನು ಕೈ ಬಿಟ್ಟಿತ್ತು. ರಾಣಿ ಜಿಎಂ ಮೋಟಾರ್ಸ್ನ ಭಾರತದ ಎರಡನೇ ರಾಯಭಾರಿಯಾಗಿ ಆಯ್ಕೆಯಾಗಿದ್ದವರು.
ಮಿತವ್ಯಯ ಲೆಕ್ಕಾಚಾರ ಕೇವಲ ಜಿಎಂ ಮೋಟಾರ್ಸ್ಗೆ ಮಾತ್ರ ಸೀಮಿತವಾಗಿಲ್ಲ. ಉಳಿದ ಕಂಪನಿಗಳೂ ಅದೇ ಹಾದಿಯಲ್ಲಿವೆ. ಮಹೀಂದ್ರಾ ಕಂಪನಿ ನಟ ಕುನಾಲ್ ಕಪೂರ್ ಅವರನ್ನು ಕೆಲವು ವಾರಗಳ ಹಿಂದೆ ಸಹಿ ಹಾಕಿಸಿಕೊಂಡಿತ್ತು. ಮಾರುತಿ ಕೂಡ ಫರ್ಹಾನ್ ಅಖ್ತರ್ ಅವರನ್ನು ಹೊಸ ಉತ್ಪನ್ನವೊಂದಕ್ಕೆ ಸೇರಿಸಿಕೊಂಡಿತ್ತು. ಹೆಚ್ಚುತ್ತಿರುವ ನಷ್ಟದಿಂದಾಗಿ ಮೇಲ್ಮಟ್ಟದ ಸ್ಟಾರ್ಗಳನ್ನು ಬದಿಗಿಟ್ಟು ಕಡಿಮೆ ಖರ್ಚಿನ ಕಡೆ ದೊಡ್ಡ ದೊಡ್ಡ ಕಂಪನಿಗಳು ಗಮನಹರಿಸಿವೆ.
ಜತೆಗೆ ಮಹೀಂದ್ರಾ ಡಿಸೆಂಬರ್ನಲ್ಲಿ ಹೊರ ತರಲಿರುವ ಹೊಸ ಕಾರು 'ಗ್ಸಿಲೋ'ಗೆ ಯಾವುದೇ ರಾಯಭಾರಿಯನ್ನು ನೇಮಿಸದಿರಲು ತೀರ್ಮಾನಿಸಿದೆ.
ಹುಂಡೈ ಮತ್ತು ಸಾಂಟ್ರೋ ಕಾರುಗಳಿಗೆ ಶಾರುಖ್ ಖಾನ್ರನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆ ಕಾಡಲಾರಂಭಿಸಿದೆ ಎಂಬ ವರದಿಗಳೂ ಬರುತ್ತಿವೆ. ಆದರೆ ಅವರನ್ನು ಪ್ರಾಯೋಜಕತ್ವದಿಂದ ಹೊರಗಿಡುವ ಕೆಲಸಕ್ಕೆ ಕಂಪನಿ ಕೈ ಹಾಕುವ ಸಾಧ್ಯತೆ ತೀರಾ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ. ಕಂಪನಿ ಸುಸ್ಥಿತಿಯಲ್ಲಿರುವುದರಿಂದ ಅಂತಹ ಪ್ರಶ್ನೆಗಳಿಲ್ಲ ಎನ್ನುವುದು ಅಭಿಪ್ರಾಯ.
|