ಮುಂಬೈನ ಹೋಟೆಲ್ಗಳ ಮೇಲೆ ನಡೆದ ಭಯೋತ್ಪಾದಕರ ದಾಳಿ ಬಹು ದೊಡ್ಡ ದುರಂತ ಎಂದು ಇನ್ಫೋಸಿಸ್ ಸಹ-ಅಧ್ಯಕ್ಷ ನಂದನ್ ನಿಲೇಕಣಿ ಆಘಾತ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕ ದಾಳಿ ಬಹುದೊಡ್ಡ ದುರಂತವಾಗಿದ್ದು, ಯುದ್ಧದ ವಾತಾವರಣ ಸೃಷ್ಟಿಸಿತ್ತು. ಇದರಿಂದಾಗಿ ಸರಕಾರದ ಕಾರ್ಯವೈಖರಿ ಹಾಗೂ ಗುಪ್ತಚರ ದಳಗಳ ವಿಫಲತೆ ಮತ್ತು ಭಯೋತ್ಪಾದನೆ ನಿಗ್ರಹಕ್ಕಾಗಿ ಕಠಿಣ ಕಾನೂನು ಜಾರಿಗೆ ತರುವ ವೈಫಲ್ಯತೆಯ ಹೂರಣ ಹೊರಬಿದ್ದಂತಾಗಿದೆ ಎಂದು ಕಿಡಿ ಕಾರಿದ್ದಾರೆ.
ಭಯೋತ್ಪಾದಕ ದಾಳಿಯನ್ನುತಡೆಯುವುದು ಸುಲಭ ಸಾಧ್ಯವಲ್ಲ. ಆದರೆ ಕಠಿಣ ಕಾನೂನು, ನಿಯಮಗಳು ಮತ್ತು ಸರಕಾರಗಳ ಸ್ಪಂದನೆಯಿಂದಾಗಿ ಕೆಲ ಮಟ್ಟಿಗಾದರೂ ನಿಗ್ರಹಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಉಗ್ರರ ದಾಳಿಯಿಂದಾಗಿ ದೇಶದ ಆರ್ಥಿಕತೆಯ ಮೇಲೆ ಅಲ್ಪಮಟ್ಟಿನ ಪರಿಣಾಮ ಬೀರಬಹುದು. ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆರ್ಥಿಕ ಕುಸಿತವಾಗಬಹುದು. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವಂತಹ ಶಕ್ತಿ ದೇಶ ಹೊಂದಿದ್ದರಿಂದ ಮತ್ತೆ ಸಹಜ ಸ್ಥಿತಿಗೆ ಮರಳಲಿದೆ ಎನ್ನುವ ಭರವಸೆಯನ್ನು ಇನ್ಫೋಸಿಸ್ ಸಹ ಅಧ್ಯಕ್ಷ ನಂದನ್ ನಿಲೇಕಣಿ ವ್ಯಕ್ತಪಡಿಸಿದ್ದಾರೆ. |