ರಾಷ್ಟ್ರೀಯ ಭದ್ರತಾ ದಳದ ಪಡೆಗಳು ಇಂದು ಬೆಳಿಗ್ಗೆ ಮೂವರು ಉಗ್ರರನನ್ನು ಹತ್ಯೆಗೈದು ಕಾರ್ಯಾಚರಣೆಯನ್ನು ಬಹುತೇಕ ಮುಕ್ತಾಯಗೊಳಿಸಿದ ನಂತರ ಟಾಟಾ ಗ್ರುಪ್ ಮುಖ್ಯಸ್ಥ ರತನ್ ಟಾಟಾ ತಾಜ್ ಹೋಟೆಲ್ಗೆ ಭೇಟಿ ನೀಡಿದರು ಎಂದು ತಾಜ್ ಹೋಟೆಲ್ ಮೂಲಗಳು ತಿಳಿಸಿವೆ. ರತನ್ ಟಾಟಾ ಅವರೊಂದಿಗೆ ಕೃಷ್ಣ ಕುಮಾರ್ ಸೇರಿದಂತೆ ತಾಜ್ ಹೋಟೆಲ್ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು,ಸೇನಾಪಡೆಗಳ ಮತ್ತು ಉಗ್ರರ ಮಧ್ಯೆ ನಡೆದ ಘರ್ಷಣೆಯಿಂದಾಗಿ ಹಾನಿಗೀಡಾದ ಹೋಟೆಲ್ ಕೋಣೆಗಳನ್ನು ವಿಕ್ಷೀಸಿದರು ಎಂದು ತಾಜ್ ಮೂಲಗಳು ತಿಳಿಸಿವೆ. ದೇಶದ ಆರ್ಥಿಕ ರಾಜಧಾನಿಯಾದ ಮುಂಬೈನ ತಾಜ್ ಹೋಟೆಲ್ನಲ್ಲಿ 529 ಕೋಣೆಗಳಿದ್ದು, ಸುಮಾರು 60 ಗಂಟೆಗಳ ಕಾಲ ಉಗ್ರರ ಕೇಂದ್ರವಾಗಿತ್ತು. ತಾಜ್ ಹೋಟೆಲ್ನ ಕೆಳಅಂತಸ್ತು, ಮೊದಲ ಮಹಡಿ, ಮತ್ತು ಎರಡನೇ ಅಂತಸ್ತಿನಲ್ಲಿ ಹೊತ್ತಿದ ಬೆಂಕಿಯನ್ನು ಆರಿಸಲು ಮೂರು ಅಗ್ನಿಶಾಮಕ ದಳಗಳು ನಿರಂತರ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಯೆಸ್ ಬ್ಯಾಂಕ್ ಅಧ್ಯಕ್ಷ ಅಶೋಕ್ ಕಪೂರ್, ಸುನೀಲ್ ಪಾರೆಖ್ ಮತ್ತು ರಿಯಲ್ಟಿ ಉದ್ಯಮಿ ಪಂಕಜ್ ಶಾ ಸೇರಿದಂತೆ ದೇಶದ ಕೆಲ ಪ್ರಮುಖ ಉದ್ಯಮಿಗಳು ಹಾಗೂ ಕಾರ್ಪೋರೇಟ್ ಕಂಪೆನಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ತಾಜ್ ಮತ್ತು ಒಬೆರಾಯ್ ಹೋಟೆಲ್ನಲ್ಲಿ ಉಗ್ರಗಾಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ತಾಜ್ ಹೋಟೆಲ್ಗೆ ರತನ್ ಟಾಟಾ ಭೇಟಿಯ ಕುರಿತಂತೆ ತಾಜ್ ವಕ್ತಾರರನ್ನು ಸಂಪರ್ಕಿಸಿದಾಗ ಹೋಟೆಲ್ನ ಕೆಲ ಅಧಿಕಾರಿಗಳನ್ನು ಮಾತ್ರ ಒಳಗೆ ಹೋಗಲು ಅನುಮತಿ ನೀಡಲಾಗಿದ್ದು, ರತನ್ ಟಾಟಾ ಅವರು ಹೋಟೆಲ್ನ ಹೊರ ಆವರಣದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.ದೇಶದ ನಾಗರಿಕರಾಗಿ ಪರಸ್ಪರರು ಕೈಜೋಡಿಸಬೇಕು ಮತ್ತು ನಾಶವಾಗಿರುವುದನ್ನು ಪುನರ್ನಿರ್ಮಾಣ ಮಾಡಬೇಕು. ನಾವು ಅಂಗವಿಕಲರಾಗಿಲ್ಲ. ಅಥವಾ ನಾಶವಾಗಿಲ್ಲ ಎನ್ನುವುದನ್ನು ಉಗ್ರರಿಗೆ ಮನವರಿಕೆ ಮಾಡಿಕೊಡಬೇಕು. ಇಂತಹ ಹೀನ ಕೃತ್ಯಗಳು ನಮ್ಮನ್ನು ಮತ್ತಷ್ಟು ಬಲಶಾಲಿಗಳನ್ನಾಗಿ ಮಾಡುತ್ತವೆ ಎನ್ನುವುದನ್ನು ಜಗತ್ತಿಗೆ ತೋರಿಸಬೇಕು ಎಂದು ರತನ್ ಟಾಟಾ ದೇಶದ ಜನತೆಗೆ ಕರೆ ನೀಡಿದ್ದಾರೆ. |