ನಗರದ ಆಯಕಟ್ಟಿನ ಕೈಗಾರಿಕಾ ಪ್ರದೇಶಗಳಿಗೆ ಪರಕೀಯರ ಪ್ರವೇಶ ನಿರ್ಬಂಧಿಸುವ ವಿಶೇಷ ಹಕ್ಕು ಹಾಗೂ ಆಧುನಿಕ ಶಸ್ತ್ರಾಸ್ತ್ರ ಹೊಂದುವ ಅವಕಾಶವನ್ನು ನಾಗರಿಕರಿಗೆ ನೀಡಬೇಕು ಎಂಬ ಬೇಡಿಕೆಯನ್ನು ನಗರದ ಕೈಗಾರಿಕೋದ್ಯಮಿಗಳು ಸರ್ಕಾರದ ಮುಂದೆ ಇಟ್ಟಿದ್ದಾರೆ.
ಮುಂಬೈ ಘಟನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಯೋಜಿಸಿದ ಉದ್ಯಮಿಗಳ ಸಭೆಯಲ್ಲಿ ಈ ಬೇಡಿಕೆಗಳು ಕೇಳಿಬಂದವು.
ಉದ್ಯಮಿಗಳಾದ ಮೋಹನ್ದಾಸ್ ಪೈ, ಕಿರಣ್ ಮಜುಮ್ದಾರ್, ಮಿಕ್ರಮ್ ಕಿರ್ಲೋಸ್ಕರ್, ರಾಜೀವ್ ಚಂದ್ರಶೇಖರ್, ತಾಜ್ ಹೋಟೆಲ್ ಪ್ರತಿನಿಧಿಗಳು ಹಲವು ಸಲಹೆಗಳನ್ನು ನೀಡಿದರು.
ಇನ್ಪೋಸಿಸ್ ಮಾನವ ಸಂಪನ್ಮೂಲ ಅಧಿಕಾರಿ ಟಿ.ವಿ.ಮೋಹನ್ದಾಸ್ ಪೈ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದರು. "ನಿಮಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ ಅಮೆರಿಕದಂತೆ ಎಕೆ 47 ನಂಥ ಆಧುನಿಕ ಶಸ್ತ್ರಾಸ್ತ್ರ ಹೊಂದಲಾದರೂ ಅನುಮತಿ ನೀಡಿ. ಇದಕ್ಕೆ ಅಗತ್ಯ ಕಾನೂನು ತಿದ್ದುಪಡಿ ತನ್ನಿ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ. ರಾಜಕಾರಣಿಗಳಿಗೆ ಪ್ರತ್ಯೇಕ ರಕ್ಷಣೆಗಳಿವೆ. ಮುಖಂಡರು ಬಂದಾಗ ರಸ್ತೆ ಬಂದಾಗ ರಸ್ತೆ ಖಾಲಿಯಾಗುತ್ತದೆ. ಆದರೆ ನಮ್ಮನ್ನು ಕೇಳುವವರಾರು?" ಎಂದು ಖಾರವಾಗಿ ಪ್ರಶ್ನಿಸಿದರು. |