ಈ ಹಿಂದೆಂದೂ ಕಾಣದ ರೀತಿಯಲ್ಲಿ ಅತ್ಯಪೂರ್ವ ಯೋಜನೆಗಳಿಂದ ನಡೆಸಿದ ಉಗ್ರರ ದಾಳಿಯಲ್ಲಿ ಭಾರತಕ್ಕೆ ಭಾರೀ ನಷ್ಟವಾಗಿರುವುದನ್ನು ಅಂದಾಜಿಸಲಾಗಿದೆ. ಮುಂಬೈನ ತಾಜ್ ಮಹಲ್, ಒಬೆರಾಯ್ ಹೊಟೇಲುಗಳು, ನಾರಿಮನ್ ಹೌಸ್ ಸೇರಿದಂತೆ ಇನ್ನಿತರ ಕಡೆ ನಡೆಸಿದ ದಾಳಿಯಿಂದಾದ ನಷ್ಟ ಮತ್ತು ವ್ಯಾವಹಾರಿಕವಾಗಿ ಸುಮಾರು 50 ಸಾವಿರ ಕೋಟಿ ನಷ್ಟವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ.
ಅಷ್ಟಕ್ಕೂ ಇದು ನಿಖರ ಅಂದಾಜೇನೂ ಅಲ್ಲ. ಸಾಮಾನ್ಯ ಲೆಕ್ಕಾಚಾರದ ಮೂಲಕ ಹೇಳಲಾಗಿದೆ. ನಷ್ಟ ಇದಕ್ಕಿಂತ ಹೆಚ್ಚಿನ ಮಟ್ಟದ್ದಾಗಿರಲೂಬಹುದು. ಎಲ್ಲವನ್ನೂ ಪರಿಶೀಲಿಸಿದ ನಂತರ ಏಜೆನ್ಸಿಗಳು ಮತ್ತು ಅಧ್ಯಯನಾ ತಂಡಗಳು ನಷ್ಟದ ಪ್ರಮಾಣ ಲೆಕ್ಕಾಚಾರ ಹಾಕಿ ಹೇಳಲು ಇನ್ನಷ್ಟು ಸಮಯ ತಗುಲಬಹುದು. ಹೊಟೇಲುಗಳು, ನಾರಿಮನ್ ಹೌಸ್ ಮತ್ತು ಇತರೆಡೆ ನಡೆದ ದಾಳಿ ಮತ್ತು ವ್ಯಾವಹಾರಿಕ ನಷ್ಟದ ಪ್ರಮಾಣ ಸುಮಾರು 50 ಸಾವಿರ ಕೋಟಿ ಎಂದು ಅಂದಾಜು ಮಾಡಲಾಗಿದೆ. ಜತೆಗೆ ವಿದೇಶಿ ವಿನಿಮಯ ಕೇಂದ್ರ, ಶೇರು ಮಾರುಕಟ್ಟೆ, ಸರಕು ವ್ಯಾಪಾರಗಳು ಕೂಡ ಒಂದು ದಿನ ಸ್ಥಗಿತಗೊಂಡು ಭಾರೀ ನಷ್ಟ ಅನುಭವಿಸಿದೆ.
ದಾಳಿಯಿಂದಾಗಿ ಮುಂಬೈಯ ಇತರ ವ್ಯವಹಾರಗಳ ಮೇಲೂ ಪ್ರಭಾವ ಬೀರಿದೆ. ಮನರಂಜನೆ, ಶಾಪಿಂಗ್ ಹಾಗೂ ರೆಸ್ಟೋರೆಂಟ್ಗಳು ಗ್ರಾಹಕರ ಕೊರತೆಯನ್ನನುಭವಿಸಿವೆ ಮತ್ತು ಈಗಲೂ ಹಿಂದಿನ ಸ್ಥಿತಿಗೆ ಮರಳಿಲ್ಲ. ನಗರದ ಸುಮಾರು 75 ಮಲ್ಟಿಪ್ಲೆಕ್ಸ್ಗಳು ಮತ್ತು 20 ಏಕಪರದೆಯ ಥಿಯೇಟರುಗಳು ಕೇವಲ ಟಿಕೆಟ್ ವ್ಯಾಪಾರದಲ್ಲಿ ತಲಾ 2 ಲಕ್ಷ ರೂಪಾಯಿ ವ್ಯವಹಾರ ನಡೆಸುತ್ತಿದ್ದವು. ಅಷ್ಟೇ ಅಲ್ಲದೆ ಫುಡ್ ಮತ್ತು ಇತರ ವ್ಯಾಪಾರಗಳೂ ಅಲ್ಲಿ ಕುಸಿತ ಕಂಡಿದೆ. ಶಾಪಿಂಗ್ ಮಾಲುಗಳು ಮತ್ತು ಚಿಲ್ಲರೆ ವ್ಯಾಪಾರಿಗಳು 50 ಪ್ರತಿಶತ ನಷ್ಟ ಅನುಭವಿಸಿದ್ದಾರೆ.
ದೇಶದ ವಾಣಿಜ್ಯ ರಾಜಧಾನಿಯಾಗಿರುವ ಮುಂಬೈಯಲ್ಲಿ ವ್ಯವಹಾರ ಸ್ಥಗಿತಗೊಂಡರೆ ಆಗುವ ನಷ್ಟ ಅಷ್ಟಿಷ್ಟಲ್ಲ. ಮುಂಬೈ ಶೇರು ಮಾರುಕಟ್ಟೆ, ಭಾರತೀಯ ರಿಸರ್ವ್ ಬ್ಯಾಂಕ್, ಟಾಟಾ ಗ್ರೂಪ್, ಮುಖೇಶ್ ಅಂಬಾನಿ ಗ್ರೂಪ್, ಭಾರತೀಯ ಸ್ಟೇಟ್ ಬ್ಯಾಂಕ್, ಇತರ ದೊಡ್ಡ ದೊಡ್ಡ ಕಂಪನಿಗಳು, ಬ್ಯಾಂಕುಗಳು ಸೇರಿದಂತೆ ಹಲವು ವಲಯದಲ್ಲಿ ಉಗ್ರರ ದಾಳಿಗಳ ಪ್ರಭಾವ ಗರಿಷ್ಠ ಮಟ್ಟದಲ್ಲೇ ಕಾಣಿಸಿಕೊಂಡಿದೆ.
|