ನಗರದಲ್ಲಿ ಬುಧವಾರದಿಂದ ಶನಿವಾರದವರೆಗಿನ ಉಗ್ರರ ಅಟ್ಟಹಾಸದಿಂದ ಮುಂಬೈಯ ಚಿನ್ನದ ವ್ಯಾಪಾರಿಗಳು ಸುಮಾರು 1200 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ ಎಂದು ಉದ್ಯಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಭಯೋತ್ಪಾದಕರ ದಾಳಿಯ ಹಿನ್ನಲೆಯಲ್ಲಿ ಚಿನಿವಾರರಿಗೆ ಸುಮಾರು 1200 ಕೋಟಿ ರೂಪಾಯಿ ನಷ್ಟವಾಗಿದೆ" ಎಂದು ಮುಂಬೈ ಬುಲಿಯನ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಹುಂಡಿಯಾ ಹೇಳಿದ್ದಾರೆ.
ದಿನಕ್ಕೆ ಸುಮಾರು 300-400 ಕೋಟಿ ವ್ಯಾಪಾರವಾಗುತ್ತಿತ್ತು. ಪ್ರತಿದಿನ ಚಿನಿವಾರರು ಒಂದು ಟನ್ ಚಿನ್ನ ತಯಾರಿಸುತ್ತಿದ್ದವರು ಈಗ ಕಷ್ಟಕ್ಕೆ ಸಿಲುಕಿದ್ದು, ಬೇಡಿಕೆ ಕುಸಿದಿದೆ. ಹಿಂದಿನ ಸ್ಥಿತಿಗೆ ಬರಲು ಮತ್ತಷ್ಟು ಕಾಲ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ.
"ಉಗ್ರರ ದಾಳಿಯಿಂದಾಗಿ ಅವರು ತೊಂದರೆಗೆ ಸಿಲುಕಿದ್ದಾರೆ. ಇಲ್ಲಿ ಸುಧಾರಣೆ ಕಾಣಲು 10ರಿಂದ 15 ದಿನಗಳು ಬೇಕಾಗಬಹುದು" ಎಂಬುದು ಹುಂಡಿಯಾ ಅಭಿಪ್ರಾಯ.
ಮುಂಬೈಯ ಉಗ್ರರ ದಾಳಿಯಿಂದಾಗಿ ಸ್ಥಳೀಯವಾಗಿ ಚಿನ್ನ ದರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅಂತಾರಾಷ್ಟ್ರೀಯ ಸಮಸ್ಯೆಗಳಿಂದಾಗಿ ಉಕ್ಕಿನ ಉದ್ಯಮದ ಮೇಲೆ ಪರಿಣಾಮವಾಗಿದೆಯೇ ಹೊರತು ಭಯೋತ್ಪಾದಕರ ದಾಳಿಯಿಂದಲ್ಲ. ಅದೇ ರೀತಿ ಸಂಭವನೀಯ ಅಡೆತಡೆಗಳಿಂದ ತೈಲ ಪೂರೈಕೆಗೂ ಬಿಸಿ ತಟ್ಟಿದೆ ಎಂದು ವಿಶ್ಲೇಷಕ ಅಮಿತ್ ಝವೇರಿ ಅಭಿಪ್ರಾಯಪಟ್ಟಿದ್ದಾರೆ.
ಅದೇ ಹೊತ್ತಿಗೆ ಐದು ವಾರಗಳಲ್ಲೇ ಅತಿ ಗರಿಷ್ಠ ಎನ್ನಬಹುದಾದ ಕಳೆದ ವಾರದ ದರ 10 ಗ್ರಾಮ್ಗಳಿಗೆ 13,185 ರೂಪಾಯಿಗಳಷ್ಟಾಗಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ಕೃಷ್ಟ ಚಿನ್ನ (ಶುದ್ಧ 99.5) ಆರಂಭಿಕ ದರ 12,870 ಆಗಿತ್ತು. ಆದರೆ ಸುಧಾರಣೆಗೊಂಡು 13,185ಕ್ಕೆ ಅಂತ್ಯಗೊಂಡಿತ್ತು. ಅದಕ್ಕಿಂತ ಹಿಂದಿನ ವಾರಾಂತ್ಯದಲ್ಲಿ 12,995 ದಾಖಲಾಗಿತ್ತು.
|