ಭಾರತದ ವಾಣಿಜ್ಯ ರಾಜಧಾನಿ ಮುಂಬೈಗೆ ಉಗ್ರರ ದಾಳಿಯಿಂದ ಸರಿಸುಮಾರು 200ರಷ್ಟು ಅಮಾಯಕರು ಬಲಿಯಾದ ದುರ್ಘಟನೆ ನಡೆದು ಅಪಾರ ನಷ್ಟ ಸಂಭವಿಸಿದ್ದರೂ, ಭಾರತ ಮತ್ತೆ ಪ್ರಬಲವಾಗಿ ಹೊರಹೊಮ್ಮಲಿದೆ ಎಂದು ಅಮೆರಿಕಾದ ಭಾರತೀಯ ಉದ್ಯಮಿಗಳ ಮಂಡಳಿ ತಿಳಿಸಿದೆ.
"ಈ ದಾಳಿ ವಿದೇಶೀಯರನ್ನು ಗುರಿ ಮಾಡಿತ್ತು ಮತ್ತು ಭಾರತೀಯರನ್ನು ಸಹ. ಹೂಡಿಕೆದಾರರ ಆತ್ಮವಿಶ್ವಾಸ ವೃದ್ಧಿಸುವ ನಿಟ್ಟಿನಲ್ಲಿ ಭಾರತದ ಆರ್ಥಿಕತೆ ಮತ್ತೆ ಚಿಗಿತುಕೊಳ್ಳಲಿದೆ. ಭಾರತದ ಒಗ್ಗಟ್ಟಿನ ಮೇಲೆ ದಾಳಿ ನಡೆಸಿ ಹಾನಿ ನಡೆಸುವ ಉದ್ದೇಶ ಅವರು ಹೊಂದಿದ್ದರು" ಎಂದು ಅಲ್ಲಿನ ವ್ಯಾವಹಾರಿಕ ಗುಂಪೊಂದು ತಿಳಿಸಿದೆ.
"ಭಾರತದ ಆರ್ಥಿಕ ಬಲಾಢ್ಯತನವನ್ನು ತಗ್ಗಿಸಲು ಉಗ್ರರು ಯತ್ನಿಸುವುದಾದರೆ ಅವರು ವಿಫಲರಾಗುತ್ತಾರೆ ಎಂಬುದು ತಿಳಿದಿರಲಿ. ನ್ಯೂಯಾರ್ಕ್ನ 9/11, ಮ್ಯಾಡ್ರಿಡ್ನಲ್ಲಿನ ರೈಲು ಸ್ಫೋಟ ಹಾಗೂ ಲಂಡನ್ ದುಷ್ಕೃತ್ಯಗಳಿಂದ ಅವು ಮತ್ತಷ್ಟು ಪ್ರಬಲವಾಗಿವೆ. ಅದೇ ರೀತಿ ಮುಂಬೈ ಘಟನೆಯಿಂದ ಭಾರತ ಮತ್ತಷ್ಟು ಬೆಳೆಯಲಿದೆ" ಎಂದು ಅದು ಹೇಳಿದೆ.
ತಾಜ್ ಮಹಲ್ ಮತ್ತು ಒಬೆರಾಯ್ ಹೊಟೇಲಿನ ಸಿಬಂದಿಗಳು, ಪೊಲೀಸ್, ಅಗ್ನಿಶಾಮಕ ದಳ, ಕಮಾಂಡೋಗಳು ಮತ್ತು ಮುಂಬೈ ಜನತೆಯನ್ನು ಅಮೆರಿಕಾದ ವ್ಯಾಪಾರಿಗಳ ಸಮೂಹವು ಅಭಿನಂದಿಸಿದೆ.
|