ಪ್ರತಿಭಟನಾಕಾರರ ವಶದಲ್ಲಿದ್ದ ಬ್ಯಾಂಕಾಕ್ ವಿಮಾನ ನಿಲ್ದಾಣ ಈಗ ಮರಳಿ ಥಾಯ್ಲೆಂಡ್ ಸರಕಾರದ ವಶಕ್ಕೆ ಸಿಕ್ಕಿದ್ದು, ಗುರುವಾರದಿಂದ ಅಂತಾರಾಷ್ಟೀಯ ಯಾನ ಆರಂಭಿಸಲಿದೆ ಎಂದು ಅಧಿಕೃತ ಪ್ರಕಟಣೆ ಹೊರಬಿದ್ದಿದೆ.
"ವಿಮಾನ ಹಾರಾಟವು ಡಿಸೆಂಬರ್ 4ರಂದು ಆರಂಭವಾಗುವ ನಿರೀಕ್ಷೆಯಿದೆ. ನಾಳಿನ ಮೊದಲ ಅಂತಾರಾಷ್ಟ್ರೀಯ ಯಾನ ಥಾಯ್ ಏರ್ವೇಸ್ ವಿಮಾನ ಬ್ಯಾಂಕಾಕ್ನಿಂದ ರೋಮ್ಗೆ ಪ್ರಯಾಣ ಬೆಳೆಸಲಿದೆ" ಎಂದು ಥಾಯ್ಲೆಂಡ್ ವಿಮಾನ ಪ್ರಾಧಿಕಾರದ ಅಧ್ಯಕ್ಷ ವುಧಿಬಂಧು ವಿಚಾಯ್ರಾತನಾ ತಿಳಿಸಿದ್ದಾರೆ.
"ಆದಷ್ಟು ಶೀಘ್ರದಲ್ಲಿ ನಾವು ಹಿಂದಿನ ಸಾಮಾನ್ಯ ಸ್ಥಿತಿಯನ್ನು ಸ್ಥಾಪನೆ ಮಾಡಲು ಯತ್ನಿಸುತ್ತೇವೆ" ಎಂದು ಅವರು ಹೇಳಿದ್ದಾರೆ. ದೇಶೀಯ ವಿಮಾನಗಳು ಈಗಾಗಲೇ ಹಾರಾಟ ಆರಂಭಿಸಿದ್ದು, ಬುಧವಾರ ಸಂಜೆಯ ಹೊತ್ತಿಗೆ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದರು.
ನವೆಂಬರ್ 25ರಿಂದ ಪ್ರತಿಭಟನಾಕಾರರ ವಶದಲ್ಲಿದ್ದ ವಿಮಾನ ನಿಲ್ದಾಣ ಅನುಭವಿಸಿದ ನಷ್ಟಗಳ ಬಗ್ಗೆ ಇನ್ನಷ್ಟೇ ಲೆಕ್ಕಾಚಾರ ಹಾಕಬೇಕಾಗಿದೆ. ಸುವರ್ಣಭೂಮಿ ವಿಮಾನ ನಿಲ್ದಾಣ ಮತ್ತು ಇತರೆಡೆಯಿಂದ ಪ್ರತಿಭಟನಾಕಾರರು ಜಾಗ ಖಾಲಿ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಥಾಯ್ಲೆಂಡಿನ ಸರಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ದೇಶದೆಲ್ಲೆಡೆ ಗಲಭೆ ಎಬ್ಬಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಇಲ್ಲಿನ ಪ್ರತಿಷ್ಠಿತ ನ್ಯಾಯಾಲಯ ಪ್ರಧಾನಿ ಸೇರಿದಂತೆ ಒಟ್ಟು 60 ಜನ ಆಡಳಿತ ಪಕ್ಷದವರಿಗೆ ಐದು ವರ್ಷಗಳ ಕಾಲ ರಾಜಕೀಯದಿಂದ ನಿಷೇಧ ವಿಧಿಸಿ ತೀರ್ಪಿತ್ತಿತು. ಇದರಿಂದ ಸಂತೃಪ್ತಿಗೊಂಡ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.
|