ದೇಶದಲ್ಲಿ ಎದುರಾದ ಆರ್ಥಿಕ ಕುಸಿತವನ್ನು ತಡೆಯಲು ವಾಣಿಜ್ಯ ವಾಹನಗಳ ಮೇಲೆ ವಿಧಿಸಲಾಗುತ್ತಿರುವ ಉತ್ಪಾದನಾ ತೆರಿಗೆಯನ್ನು ಕಡಿತಗೊಳಿಸುವ ಕುರಿತಂತೆ ಕೇಂದ್ರ ಸರಕಾರ ಘೋಷಿಸಲಿದ್ದು, ಗೃಹ, ವ್ಯಯಕ್ತಿಕ ಮತ್ತು ಇನ್ನಿತರ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲು ರಿಸರ್ವ್ ಬ್ಯಾಂಕ್ ಹಸಿರು ನಿಶಾನೆ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಸರ್ವೋಚ್ಚ ಸಮಿತಿಯ ನಿರ್ದೆಶನದ ಮೇರೆಗೆ ಸಂಪುಟ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್ ನೇತೃತ್ವದಲ್ಲಿ ಸಮಿತಿಯ ಕಾರ್ಯದರ್ಶಿಗಳು ಪ್ಯಾಕೇಜ್ ರೂಪರೇಷೆಗಳನ್ನು ನಿರ್ಧರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗೋಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ 65 ಸಾವಿರ ಉದ್ಯೋಗಿಗಳು ಉದ್ಯೋಗವನ್ನು ಕಳೆದುಕೊಂಡಿರುವುದು ಸರಕಾರಕ್ಕೆ ಅತೀವ ಕಳವಳವಾಗಿದ್ದು, ಶೀಘ್ರದಲ್ಲಿ ಪ್ಯಾಕೇಜ್ ಮತ್ತಿತರ ಸೌಲಭ್ಯಗಳನ್ನು ಘೋಷಿಸದಿದ್ದಲ್ಲಿ ಮುಂದಿನ ನಾಲ್ಕು ತಿಂಗಳಲ್ಲಿ ಸಾವಿರಾರು ಕಾರ್ಖಾನೆಗಳು ಮುಚ್ಚಲ್ಪಡುತ್ತವೆ. ಒಂದು ವೇಳೆ ಕಾರ್ಖಾನೆಗಳು ಬಂದ್ ಘೋಷಿಸಿದಲ್ಲಿ ಮತ್ತೆ ಆರಂಭಿಸಲು ಇನ್ನೂ ಹೆಚ್ಚಿನ ಪ್ಯಾಕೇಜ್ ಅಗತ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ಮತ್ತು ಕ್ಯಾಶ್ ರಿಸರ್ವ್ ರೇಶಿಯೊ ಕಡಿತಗೊಳಿಸುತ್ತಿದ್ದು, ಬ್ಯಾಂಕ್ಗಳಿಗೆ ಅಗತ್ಯವಾದ ಆರ್ಥಿಕ ಬೆಂಬಲವನ್ನು ಆರ್ಬಿಐ ನೀಡಲಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. |