ಜಾಗತಿಕ ಆರ್ಥಿಕ ಕುಸಿತದಿಂದಾಗಿ ಎದುರಾದ ದೇಶದ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಕೇಂದ್ರ ಸರಕಾರ ಘೋಷಿಸಲಿರುವ ಬಹುನಿರೀಕ್ಷಿತ ಉತ್ತೇಜನ ಪ್ಯಾಕೇಜ್ ಒಂದು ದಿನದ ಅವಧಿಗೆ ಮುಂದೂಡಲಾಗಿದ್ದು, ರವಿವಾರ ಘೋಷಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ರಿಸರ್ವ ಬ್ಯಾಂಕ್ ಮತ್ತು ಪ್ರಧಾನ ಮಂತ್ರಿ ನೇತೃತ್ವದ ಅಪೆಕ್ಸ್ ಸಮಿತಿ ಪ್ಯಾಕೇಜ್ ಸಿದ್ದಪಡಿಸಿದ್ದು, ಶನಿವಾರದಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಘೋಷಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿಯ ಅಧಿಕಾರಿಗಳು ಹೇಳಿಕೆ ನೀಡಿದ್ದರು.
ಔದ್ಯೋಗಿಕ ಅಭಿವೃದ್ಧಿಗೆ ಕೇಂದ್ರ ಸರಕಾರ ಕೆಲ ಉತ್ಪನ್ನಗಳ ಮೇಲೆ ಅಬಕಾರಿ ತೆರಿಗೆಯನ್ನು ಕಡಿತಗೊಳಿಸಿದ್ದು,ಮತ್ತಿತರ ಸೌಲಭ್ಯಗಳನ್ನು ಘೋಷಿಸುವ ನಿರೀಕ್ಷೆಗಳಿವೆ ಎಂದು ಉದ್ಯಮಗಳ ಮೂಲಗಳು ತಿಳಿಸಿವೆ
ಜಾಗತಿಕ ಆರ್ಥಿಕ ಕುಸಿತದಿಂದ ನಷ್ಟ ಎದುರಿಸುತ್ತಿರುವ ಕ್ಷೇತ್ರಗಳಿಗೆ ಪ್ರಥಮ ಬಾರಿಗೆ ಕೇಂದ್ರ ಸರಕಾರ ಉತ್ತೇಜನ ಪ್ಯಾಕೇಜ್ ಘೋಷಿಸುತ್ತಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ.
ಮೊದಲ ಹಂತದ ಪ್ಯಾಕೇಜ್ ನಾಳೆ ಘೋಷಣೆಯಾಗಲಿದ್ದು, ನಂತರ ಎರಡನೇ ಹಾಗೂ ಮೂರನೇ ಹಂತದ ಪ್ಯಾಕೇಜ್ನ್ನು ಹಂತ ಹಂತವಾಗಿ ಘೋಷಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಕಮಲನಾಥ್ ಹೇಳಿದ್ದಾರೆ. |