ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ ಅವರನ್ನು ಶಿವರಾಜ್ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಗೃಹ ಖಾತೆಗೆ ವರ್ಗಾಯಿಸಿದ್ದರಿಂದ ನೂತನ ವಿತ್ತ ಸಚಿವರ ಆಯ್ಕೆಗೆ ಹುಡುಕಾಟ ಆರಂಭವಾಗಿದ್ದು, ಎಸ್.ಎಂ.ಕೃಷ್ಣ,ಸಿ.ರಂಗರಾಜನ್ ಮತ್ತು ಕಪಿಲ್ ಸಿಬಲ್ ಹೆಸರುಗಳು ಕೇಳಿ ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಸಮಯದ ಅಭಾವವಿರುವುದರಿಂದ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಅವರನ್ನು ವಿತ್ತ ಸಚಿವರನ್ನಾಗಿ ಮಾಡಲು ಪ್ರಧಾನಿ ಬಯಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಮೊಂಟೆಕ್ ಅವರ ನೇಮಕವನ್ನು ವಿರೋಧಿಸಿದ್ದರಿಂದ ನೂತನ ವಿತ್ತ ಸಚಿವರಿಗಾಗಿ ಹುಡುಕಾಟ ಆರಂಭವಾಗಿದೆ.
ಪ್ರಧಾನ ಮಂತ್ರಿಗಳ ಮಾಜಿ ಆರ್ಥಿಕ ಸಲಹೆಗಾರ ಹಾಗೂ ಮಾಜಿ ಆರ್ಬಿಐ ಅಧ್ಯಕ್ಷ ಸಿ.ರಂಗರಾಜನ್ ಅವರನ್ನು ವಿತ್ತ ಸಚಿವರನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷ ನಿರಾಕರಿಸಿದ್ದು, ರಾಜಕೀಯ ವ್ಯಕ್ತಿಗೆ ಮಾತ್ರ ವಿತ್ತ ಸಚಿವರನ್ನಾಗಿಸಲು ಕಾಂಗ್ರೆಸ್ ಹುಡುಕಾಟ ನಡೆಸಿದೆ.
ಮುಂಬೈ ಮೇಲೆ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಶಿವರಾಜ್ ಪಾಟೀಲ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ವಿತ್ತ ಸಚಿವರಾಗಿದ್ದ ಚಿದಂಬರಂ ಗೃಹಖಾತೆಯನ್ನು ವಹಿಸಿಕೊಂಡರು. ವಿತ್ತ ಸಚಿವ ಖಾತೆಯನ್ನು ಆರ್ಥಿಕ ತಜ್ಞರಾದ ಪ್ರಧಾನಿ ಮನಮೋಹನ್ ಸಿಂಗ್ ಸ್ವತಃ ವಹಿಸಿಕೊಂಡಿದ್ದಾರೆ.
ಕಲ್ಲಿದ್ದಲು ಖಾತೆ ಸಚಿವರಾಗಿದ್ದ ಶಿಬು ಸೋರೆನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ತೆರುವಾದ ಕಲ್ಲಿದ್ದಲು ಖಾತೆ ಮತ್ತು ಮುನ್ಶಿಯವರ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ಕೂಡಾ ಪ್ರಧಾನಿಯವರ ಸುರ್ಪದಿಗೆ ವಹಿಸಲಾಗಿದೆ. |