ಕೊಚ್ಚಿ: ಶೇರು ಮಾರುಕಟ್ಟೆ ಮತ್ತು ಸ್ಥಿರಾಸ್ತಿ ಬೆಲೆಯಲ್ಲಿನ ಕುಸಿತವು ಕ್ಷಣಿಕವಾಗಿದ್ದು, ಬಿಕ್ಕಟ್ಟಿನ ಪರಿಸ್ಥಿತಿಯ ಸಕಾಲಿಕವಾಗಿ ತಿದ್ದುಪಡಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಒ.ಪಿ ಭಟ್ ಹೇಳಿದ್ದಾರೆ. ಗಗನಕ್ಕೇರಿರುವ ಸ್ಥಿರಾಸ್ತಿ ಬೆಲೆಗಳು ಮತ್ತು ಶೇರು ಸೂಚ್ಯಂಕಗಳು ದೀರ್ಘಕಾಲಿಕವಾಗಿ ಸ್ಥಿರವಾಗಿರುವುದಿಲ್ಲ ಮತ್ತು ಶೇರು ಮಾರುಕಟ್ಟೆ ಕುಸಿತವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತಿದ್ದುಪಡಿಯಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಮುಂಬೈ ಶೇರು ಸೂಚ್ಯಂಕವು ಕಳೆದ ಮಾರ್ಚ್ ತಿಂಗಳಲ್ಲಿ ಉತ್ಕೃಷ್ಟ ಮಟ್ಟವಾದ 22,000 ಅಂಕಗಳನ್ನು ತಲುಪಿ ಇದೀಗ 8,000 ಅಂಕಗಳಿಗಿಂತ ಕೆಳಗಿಳಿದಿದ್ದು, ಅದೇ ಸಮಯ ಬಾನೆತ್ತರಕ್ಕೆ ಬೆಳೆದಿದ್ದ ಆಸ್ತಿಗಳ ಬೆಲೆಯು ಸಹ ಸಾಲ ಬಿಕ್ಕಟ್ಟಿನಿಂದಾಗಿ ಮಂದಗತಿಯಲ್ಲಿ ಸಾಗುತ್ತಿದೆ.
ಗೃಹಸಾಲದಲ್ಲಿನ ಬೇಡಿಕೆಯು ಕೆಳಗಿಳಿಯುವುದರೊಂದಿಗೆ ದೇಶದಲ್ಲಿ ಸ್ಥಿರಾಸ್ತಿ ಬೆಲೆಯು ಸರಿದೂಗಲಿದೆ.
ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಾಗ ಭಾರತದ ಆರ್ಥಿಕತೆಯು ಬಹಳ ವೇಗವಾಗಿ ಮುಂದುವರಿಯುತ್ತಿರುವುದಾಗಿ ಭಟ್ ಅವರು ಭಾರತದ ಆರ್ಥಿಕತೆಯ ಬಗ್ಗೆ ಮಾತನಾಡುತ್ತಾ ತಿಳಿಸಿದರು.
ಅಭಿವೃದ್ಧಿ ಹೊಂದಿದ ಬ್ರಿಟನ್, ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಜಪಾನ್ಗಳಂತಹ ದೇಶಗಳಿಗೆ ಹೊಲಿಸಿದರೆ ಜಿಡಿಪಿಯಲ್ಲಿ ಶೇಕಡಾ 6ರಷ್ಟು ಅಭಿವೃದ್ಧಿ ಹೊಂದಿರುವ ಭಾರತವು ತುಂಬಾ ಮುಂದಿದ್ದು, ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳು ಅತೀ ಹೆಚ್ಚು ತೊಂದರೆಯನ್ನು ಅನುಭವಿಸಿದೆ ಎಂದು ಬ್ಯಾಂಕರ್ಸ್ ಕ್ಲಬ್ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಭಟ್ ನುಡಿದರು.
ಭಾರತದ ಆರ್ಥಿಕತೆಯು ಶಕ್ತಿಯುತವಾಗಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದ ಭಟ್, ಆರ್ಥಿಕತೆಯು ತಾತ್ಕಾಲಿಕ ಸಮಸ್ಯೆಯನ್ನು ಎದುರಿಸುತ್ತಿದೆ, ಆದರೆ ಭಾರತದ ಆರ್ಥಿಕತೆ ಕ್ಷೀಣಿಸುವಂತಹ ಪರಿಸ್ಥತಿ ಇಲ್ಲವೆಂದು ಅವರು ನುಡಿದರು. |