ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ನಿರಂತರ ಇಳಿಕೆಯಾಗುತ್ತಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಸರಕಾರ ಮುನ್ಸೂಚನೆ ನೀಡಿದೆ.ಅಂತಾರಾಷ್ಟ್ರೀಯ ಕಚ್ಚಾ ತೈಲ ದರಗಳನ್ನು ಸರಕಾರ ಗಮನಿಸುತ್ತಿದ್ದು, ಮತ್ತಷ್ಟು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿತ ಮಾಡಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇಂದ್ರ ಗೃಹಖಾತೆ ಸಚಿವ ಪಿ.ಚಿದಂಬರಂ ರಾಜ್ಯಸಭೆಗೆ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದ್ದಾರೆ.ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್ಗೆ 147 ಡಾಲರ್ಗಳಿದ್ದ ತೈಲ ದರ 45 ಡಾಲರ್ಗಳಿಗೆ ಇಳಿಕೆಯಾಗಿದ್ದರಿಂದ, ಸರಕಾರ ತಿಂಗಳ ಆರಂಭದಲ್ಲಿ ಪೆಟ್ರೋಲ್ ಮೇಲೆ 5 ರೂಪಾಯಿ ಹಾಗೂ ಡೀಸೆಲ್ ಮೇಲೆ 2 ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿತ್ತು.ಮಾಜಿ ಹಣಕಾಸು ಸಚಿವರಾದ ಚಿದಂಬರಂ ,ಇತ್ತೀಚೆಗೆ ವಿತ್ತ ಖಾತೆಯನ್ನು ವಹಿಸಿಕೊಂಡ ಪ್ರಧಾನ ಮಂತ್ರಿಯನರ ಪರವಾಗಿ ರಾಜ್ಯಸಭೆಯಲ್ಲಿ ಮಾತನಾಡಿ ,ಇಂಧನ ದರಗಳನ್ನು ಕಡಿತಗೊಳಿಸುವ ಬೇಡಿಕೆ ಕುರಿತಂತೆ ಸರಕಾರ ಪರಿಶೀಲಿಸುತ್ತಿದೆ ಎಂದು ಹೇಳಿದರು. ದರ ಕಡಿತದ ನಂತರವೂ ಸಾರ್ವಜನಿಕ ಸ್ವಾಮ್ಯದ ತೈಲ ಕಂಪೆನಿಗಳು ಪ್ರತಿ ಲೀಟರ್ ಪೆಟ್ರೋಲ್ಗೆ 9.98 ರೂಪಾಯಿ ಹಾಗೂ ಡೀಸೆಲ್ಗೆ 1.03 ರೂಪಾಯಿ ಲಾಭ ಪಡೆಯುತ್ತಿದ್ದು, ಜಾಗತಿಕ ಕಚ್ಚಾ ತೈಲ ದರಗಳಲ್ಲಿ ಮತ್ತಷ್ಟು ಇಳಿಕೆಯಾದಲ್ಲಿ ಪೆಟ್ರೋಲ್ ಮೇಲೆ 11.48 ಹಾಗೂ ಡೀಸೆಲ್ ಮೇಲೆ 2.92 ರೂಪಾಯಿ ಹೆಚ್ಚುವರಿ ಲಾಭ ಪಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತೈಲ ಕಂಪೆನಿಗಳು ಪ್ರತಿ ಲೀಟರ್ ಸೀಮೆಎಣ್ಣೆ ಮೇಲೆ 17.26 ರೂಪಾಯಿ ಹಾಗೂ ಅನಿಲ ಸಿಲೆಂಡರ್ ಮೇಲೆ 148.38 ರೂಪಾಯಿ ನಷ್ಟ ಅನುಭವಿಸುತ್ತಿವೆ.ಇಂಡಿಯನ್ ಆಯಿಲ್ , ಭಾರತ್ ಪೆಟ್ರೋಲಿಯಂ, ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗಳು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಇಂಧನ ಮಾರಾಟದಿಂದಾಗಿ 111,500 ಕೋಟಿ ರೂ.ಗಳ ನಷ್ಟ ಅನುಭವಿಸಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.ಪ್ರತ್ಯೇಕವಾಗಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೀಯೋರಾ ಡಿಸೆಂಬರ್ 5 ರಂದು ಮಾಡಲಾದ ಇಂಧನ ದರ ಕಡಿತ ಕೇವಲ ಮಧ್ಯಂತರ ಕ್ರಮವಾಗಿದೆ. ಸೀಮೆ ಎಣ್ಣೆ ಮತ್ತು ಅನಿಲ ಸಿಲೆಂಡರ್ಗಳ ಮಾರಾಟದಿಂದಾಗಿರುವ ನಷ್ಟವನ್ನು ಭರಿಸುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಕಡಿತ ಸಧ್ಯಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. |