ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿತವಾದ ಹಿನ್ನೆಲೆಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಇಳಿಕೆ ಮಾಡುವಂತೆ ಸಮಾಜವಾದಿ ಪಕ್ಷದ ಮುಖಂಡರು ಲೋಕಸಭೆಯಲ್ಲಿ ಕೋಲಹಲ ಸೃಷ್ಟಿಸಿದ ಕಾರಣ ಸಭೆಯನ್ನು ಮುಂದೂಡಲಾಯಿತು ಎಂದು ಮೂಲಗಳು ತಿಳಿಸಿವೆ.ತೈಲ ದರ ಇಳಿಕೆ ಕುರಿತಂತೆ ಕೇಂದ್ರ ಸರಕಾರದ ಮೇಲೆ ರಾಜಕೀಯ ಪಕ್ಷಗಳು ಒತ್ತಡ ಹೇರುತ್ತಿರುವುದು ಸ್ವಾಗತಾರ್ಹ ಎಂದು ಕಾಂಗ್ರೆಸ್ ಸಂಸದರು ಹೇಳಿಕೆ ನೀಡಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳ ಕಡಿತದಿಂದ ದೇಶದ ಸಮಸ್ತ ಜನತೆಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ತೈಲ ದರ ಕಡಿತವನ್ನು ಸರಕಾರ ಘೋಷಿಸಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಸಂಸದರು, ತೈಲ ದರ ಕಡಿತ ಮಾಡಲು ಸರಕಾರ ವಿಳಂಬ ನೀತಿ ಅನುಸರಿಸುವುದಿಲ್ಲ. ತೈಲ ದರವನ್ನು ಮತ್ತಷ್ಟು ಕಡಿತಗೊಳಿಸುವುದರಿಂದ ಸಾಗಾಣಿಕೆ, ತರಕಾರಿ ದರಗಳಲ್ಲಿ ಇಳಿಕೆಯಾಗುವುದಲ್ಲದೇ ಪಂಪ್ಸೆಟ್ಗಳನ್ನು ಬಳಸುವ ರೈತರಿಗೆ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸರಕಾರ ಪ್ರಸಕ್ತ ತಿಂಗಳಿನಲ್ಲಿ ಪೆಟ್ರೋಲ್ಗೆ 3 ರೂಪಾಯಿ ಹಾಗೂ ಡೀಸೆಲ್ಗೆ 2 ರೂಪಾಯಿ ಕಡಿತ ಮಾಡಿ ಘೋಷಿಸಿತ್ತು. ಆದರೆ ಜಾಗತಿಕ ಆರ್ಥಿಕ ಕುಸಿತದಿಂದಾಗಿ ತೈಲ ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ತೈಲ ದರ ನಿಯಂತ್ರಿಸಲು ಒಪೆಕ್ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಹೆಚ್ಚಿದ ತೈಲ ಉತ್ಪಾದನೆ ಹಾಗೂ ಬೇಡಿಕೆ ಕುಸಿತದಿಂದಾಗಿ ಮತ್ತಷ್ಟು ದರದಲ್ಲಿ ಇಳಿಕೆಯಾಗಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಹೆಚ್ಚಿನ ಉದಾರತೆಯನ್ನು ತೋರುವ ಸಮಯ ಬಂದಿರುವುದರಿಂದ ಅನಿಲ್ ಸಿಲೆಂಡರ್ ಮೇಲೆ 100 ರೂಪಾಯಿಗಳನ್ನು ಇಳಿಕೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಕಾಂಗ್ರೆಸ್ ಸಂಸದರಿಗೆ ತಿಳಿಸಿದ್ದಾರೆ. |