ಒಂದೋ ಕರ್ತವ್ಯಕ್ಕೆ ಹಾಜರಾಗಿ, ಇಲ್ಲವೇ ಕಠಿಣ ಕ್ರಮ ಎದುರಿಸಿ ಎಂದು ಕೇಂದ್ರ ಸರಕಾರವು ಎಚ್ಚರಿಕೆ ನೀಡಿದ ಬೆನ್ನಿಗೇ, ತೈಲ ಕ್ಷೇತ್ರದ ಅಧಿಕಾರಿಗಳು ನಡೆಸುತ್ತಿದ್ದ ಮುಷ್ಕರ ಕೊನೆಗೊಂಡಿದ್ದು, ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಅನಿಲಕ್ಕಾಗಿ ಎದ್ದಿದ್ದ ಹಾಹಾಕಾರ ಕೊನೆಗೊಳ್ಳುವ ಲಕ್ಷಣಗಳು ಗೋಚರಿಸತೊಡಗಿದೆ.
ಸರಕಾರಿ ಸ್ವಾಮ್ಯದ ತೈಲ ವಿತರಣಾ ಕಂಪನಿಗಳ ಅಧಿಕಾರಿಗಳ ಒಕ್ಕೂಟವು ಮುಂದಿಟ್ಟಿದ್ದ ವೇತನ ಏರಿಕೆ ಬೇಡಿಕೆಗೆ ಮಣಿಯುವುದೇ ಇಲ್ಲ ಎಂದು ಸರಕಾರ ಖಡಾಖಂಡಿತವಾಗಿ ಹೇಳಿತ್ತಲ್ಲದೆ, ತೈಲ ವಿತರಣೆ ಸಮರ್ಪಕವಾಗಿಸುವ ನಿಟ್ಟಿನಲ್ಲಿ ಸೇನೆಯನ್ನು ಕರೆಸುವ ನಿರ್ಧಾರ ಕೈಗೊಂಡಿತ್ತು.
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ನ (ಬಿಪಿಸಿಎಲ್) ಮತ್ತು ಆಯಿಲ್ ಇಂಡಿಯಾ ಕಾರ್ಪೊರೇಶನ್ ಅಧಿಕಾರಿಗಳ ಒಕ್ಕೂಟವು ಮುಷ್ಕರ ಸ್ಥಗಿತಗೊಳಿಸಿರುವುದಾಗಿ ಹೇಳಿಕೆ ನೀಡಿದೆ. ಎಚ್ಪಿಸಿಎಲ್ ಎಂದಿನಂತೆ ಕೆಲಸ ಮುಂದುವರಿಸಿತ್ತು. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಂತೂ, ಶನಿವಾರ, ಭಾನುವಾರ ಕೆಲಸಕ್ಕೆ ಹಾಜರಾಗದ ನೌಕರರನ್ನು ವಜಾಗೊಳಿಸುವುದಾಗಿ ಎಚ್ಚರಿಕೆ ನೀಡಿತ್ತು.
ಸಾರ್ವಜನಿಕ ಹಿತಾಸಕ್ತಿಗಾಗಿ ಮುಷ್ಕರ ಕೊನೆಗೊಳಿಸಿರುವುದಾಗಿ ಯೂನಿಯನ್ ಮುಖಂಡ ಸಂಜಯ್ ವಾರ್ಷ್ಣೆ ಹೇಳಿದ್ದಾರೆ. ತಮ್ಮ ನೌಕರರೆಲ್ಲರೂ ಕೆಲಸಕ್ಕೆ ಹಾಜರಾಗಿದ್ದಾರೆ ಎಂಬುದನ್ನು ಬಿಪಿಸಿಎಲ್ ದೃಢಪಡಿಸಿದೆ.
ಸೇನೆಯೂ ಸೇರಿದಂತೆ ಸರಕಾರದ ಎಲ್ಲ ಸಂಪನ್ಮೂಲಗಳನ್ನೂ ಕಾರ್ಯಾಚರಣೆಗೆ ತೊಡಗಿಸಿಕೊಂಡು, ದೇಶಾದ್ಯಂತ ತೈಲ ವಿತರಣೆಗೆ ಯಾವುದೇ ಬಾಧೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ತೈಲ ವಿತರಣಾ ಕಂಪನಿಗಳ ಅಧಿಕಾರಿಗಳ ಒಕ್ಕೂಟವು ಇಡೀ ರಾಷ್ಟ್ರವನ್ನೇ ಹದ್ದುಬಸ್ತಿನಲ್ಲಿರಿಸಿಕೊಳ್ಳುವ ಯತ್ನ ನಡೆಯುವುದಿಲ್ಲ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್.ಪಾಂಡೆ ಅವರು ನವದೆಹಲಿಯಲ್ಲಿ ಬೆಳಿಗ್ಗೆ ಎಚ್ಚರಿಕೆ ನೀಡಿದ್ದರು.
ಸೇನಾ ಘಟಕಗಳನ್ನು ಅದಾಗಲೇ ಕರೆಸಲಾಗಿದ್ದು, ತೈಲ ವಿತರಣಾ ಚಟುವಟಿಕೆಗೆ ಚಾಲನೆ ನೀಡಲಾಗಿತ್ತು. |