ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ನ ಇಬ್ಬರು ಮುಖಂಡರ ಬಂಧನದ ಹೊರತಾಗಿಯೂ ಸರಕಾರ ಮತ್ತು ಟ್ರಕ್ ಮಾಲೀಕರ ನಡುವಣ ಬಿಕ್ಕಟ್ಟಿಗೆ ಯಾವುದೇ ಪರಿಹಾರ ದೊರೆಯುವ ಸೂಚನೆಗಳು ಕಡಿಮೆಯಾಗಿದ್ದು, ಟ್ರಕ್ ಮುಷ್ಕರ ಶನಿವಾರ ಆರನೇ ದಿನಕ್ಕೆ ಕಾಲಿಟ್ಟಿದೆ.
ಸರಕಾರ ನಮ್ಮ ಬೇಡಿಕೆಗೆ ಒಪ್ಪುವವರೆಗೂ ನಾವು ಮುಷ್ಕರ ಮುಂದುವರಿಸುತ್ತೇವೆ. ಈಗಾಗಲೇ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ ಎಂದು ಎಐಎಂಟಿಸಿ ಉಪಾಧ್ಯಕ್ಷ ಅಮಲೋಕ್ ಸಿಂಗ್ ಭಾಟಿಯಾ ಹೇಳಿದ್ದಾರೆ. ಈ ಮಧ್ಯೆ, ಟ್ರಕ್ ಮಾಲೀಕರ ಬೇಡಿಕೆಗೆ ಮಣಿಯದಿರಲು ನಿರ್ಧರಿಸಿರುವ ಸಾರಿಗೆ ಸಚಿವ ಟಿ.ಆರ್.ಬಾಲು, ಮಾತು ಕೇಳದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಆದರೂ ಟ್ರಕ್ ಮಾಲೀಕರು ಮುಷ್ಕರ ಕೈಬಿಡದಿರಲು ತೀರ್ಮಾನಿಸಿದ್ದಾರೆ. ಟ್ರಕ್ ಮುಷ್ಕರದಿಂದಾಗಿ ಆಹಾರ, ಹಣ್ಣು, ತರಕಾರಿ ಮತ್ತಿತರ ದಿನಬಳಕೆ ವಸ್ತುಗಳ ವಿತರಣೆ ಸಾಗಾಟಕ್ಕೆ ತೀವ್ರ ತೊಂದರೆಯಾಗಿದ್ದು, ಬೇಡಿಕೆಗೆ ಮಣಿಯುವುದಿಲ್ಲ ಎಂದು ಪಟ್ಟು ಹಿಡಿದಿರುವ ಸರಕಾರ ಮತ್ತು ಮುಷ್ಕರ ನಿಲ್ಲಿಸುವುದಿಲ್ಲ ಎಂಬ ಮಾತಿಗೆ ಅಂಟಿಕೊಂಡಿರುವ ಟ್ರಕ್ ಮಾಲೀಕರ ನಡುವಿನ ತಿಕ್ಕಾಟದಲ್ಲಿ ಜನ ಸಾಮಾನ್ಯರು ಪಾಡು ಪಡುವಂತಾಗಿದೆ.
ಸರಕಾರಕ್ಕೆ ಜನಸಾಮಾನ್ಯರ ಬಗ್ಗೆ ಕಾಳಜಿ ಎಷ್ಟಿದೆ ಎಂದು ಇದರಿಂದ ತಿಳಿಯುತ್ತದೆ ಎಂಬುದಾಗಿ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಅಂತೆಯೇ ಟ್ರಕ್ ಮಾಲೀಕರಿಗೂ ಕೂಡ ತಮ್ಮ ಸ್ವಾರ್ಥವೇ ಹೆಚ್ಚಾಗಿ ಕಂಡು, ಜನ ಹಿತದ ಬಗ್ಗೆ ಯೋಚಿಸುವುದಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ.
ಎಐಎಂಟಿಸಿ ಅಧ್ಯಕ್ಷ ಚರಣ್ ಸಿಂಗ್ ಲೋಹಾರಾ, ಕಾರ್ಯದರ್ಶಿ ಎಸ್.ವೇಣುಗೋಪಾಲ್ ಮತ್ತು ಇತರ 30 ಮಂದಿಯನ್ನು ದೆಹಲಿ ಪೊಲೀಸರು ಶುಕ್ರವಾರ ಎಸ್ಮಾ (ಆವಶ್ಯಕ ಸೇವೆ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ, ಮುಷ್ಕರ ಮತ್ತಷ್ಟು ತೀವ್ರಗೊಳಿಸುವುದಾಗಿ ಟ್ರಕ್ ಮಾಲೀಕರು ಘೋಷಿಸಿದ್ದರು.
ಇದು ಜನ ಹಿತಕ್ಕೆ ವಿರುದ್ಧವಾದ ಮುಷ್ಕರ ಎಂದು ಗೃಹ ಸಚಿವ ಪಿ.ಚಿದಂಬರಂ ಈಗಾಗಲೇ ಹೇಳಿದ್ದು, ಟ್ರಕ್ ಮಾಲೀಕರ ಹೆಚ್ಚಿನ ಬೇಡಿಕೆಗಳು ಆಯಾ ರಾಜ್ಯಗಳಿಗೆ ಸಂಬಂಧಿಸಿರುವುದರಿಂದಾಗಿ, ಕೇಂದ್ರವು ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬ ಕುರಿತು ಮಾಹಿತಿ ಲಭ್ಯವಾಗಿದೆ.
ಟ್ರಕ್ ಮಾಲೀಕರು ಮತ್ತು ಸರಕಾರದ ನಡುವಣ ತಿಕ್ಕಾಟದಲ್ಲಿ ಆವಶ್ಯಕ ವಸ್ತುಗಳ ಕೊರತೆಯಿಂದಾಗಿ ಬೆಲೆಗಳು ಗಗನಕ್ಕೇರತೊಡಗಿದ್ದು, ಜನರೇ ರೊಚ್ಚಿಗೇಳುವ ಮುನ್ನ ಉಭಯ ಪಂಗಡದವರೂ ಏನಾದರೊಂದು ಪರಿಹಾರ ಕಂಡು ಹುಡುಕಬೇಕೆಂಬುದು ನಾಗರಿಕರ ಒತ್ತಾಸೆ. |